ಅಲ್ ಕಸಸ್ | ترجمة سورة القصص

    تـرجمـة سورة القصص من القـرآن الكريـم إلى اللغـة الكناديـة من قبـل المترجـم / إقبـال صوفـي – الكــويت

سـهل الفهـم من غيـر الـرجـوع إلى كتاب التفسيـر

| ಸೂರಃ ಅಲ್ ಕಸಸ್  | ಪವಿತ್ರ ಕುರ್‌ಆನ್ ನ 28 ನೆಯ ಸೂರಃ | ಇದರಲ್ಲಿ ಒಟ್ಟು 88 ಆಯತ್ ಗಳು ಇವೆ |

ಮಹಾ ಕರುಣಾಮಯಿಯೂ ನಿರಂತರವಾಗಿ ಕರುಣೆ ತೋರುವವನೂ ಆದ ಅಲ್ಲಾಹ್ ನ (ಪವಿತ್ರ) ನಾಮದೊಂದಿಗೆ (ಆರಂಭಿಸುವೆ)!

طسم

ತಾ - ಸೀನ್ - ಮೀಮ್ {1}

تِلْكَ آيَاتُ الْكِتَابِ الْمُبِينِ

ಇವು ಬಹಳ ಸ್ಪಷ್ಟವಾದಂತಹ ಒಂದು ಗ್ರಂಥದ ವಚನಗಳಾಗಿವೆ. {2}

نَتْلُو عَلَيْكَ مِنْ نَبَإِ مُوسَىٰ وَفِرْعَوْنَ بِالْحَقِّ لِقَوْمٍ يُؤْمِنُونَ

(ಓ ಪೈಗಂಬರರೇ), ನಂಬುವಂತಹ ಜನರಿಗಾಗಿ ಪ್ರವಾದಿ ಮೂಸಾ ಮತ್ತು ಫಿರ್‌ಔನ್ ರ ವೃತ್ತಾಂತದಿಂದ ಸ್ವಲ್ಪವನ್ನು ನಾವು ಅದರ ವಾಸ್ತವಿಕತೆಯೊಂದಿಗೆ ನಿಮಗೆ ತಿಳಿಸಿಕೊಡುತ್ತಿದ್ದೇವೆ. {3}

إِنَّ فِرْعَوْنَ عَلَا فِي الْأَرْضِ وَجَعَلَ أَهْلَهَا شِيَعًا يَسْتَضْعِفُ طَائِفَةً مِنْهُمْ يُذَبِّحُ أَبْنَاءَهُمْ وَيَسْتَحْيِي نِسَاءَهُمْ ۚ إِنَّهُ كَانَ مِنَ الْمُفْسِدِينَ

ನಿಜಕ್ಕೂ, ಫಿರ್‌ಔನ್ ತನ್ನ ನಾಡಿನಲ್ಲಿ ದರ್ಪದಿಂದ ವರ್ತಿಸಿದ್ದನು; ನಾಡಿನ ಜನರನ್ನು (ಹತೋಟಿಯಲ್ಲಿಟ್ಟುಕೊಳ್ಳವ ಸಲುವಾಗಿ ಅವರನ್ನು) ವಿವಿಧ ಪಂಗಡಗಳನ್ನಾಗಿ ಒಡೆದಿದ್ದನು. ಅಲ್ಲಿಯ ಜನರ ಒಂದು ವಿಭಾಗದವರನ್ನು ಅವನು ಬಹಳವಾಗಿ ಮರ್ದಿಸುತ್ತಿದ್ದನು. ಅವರ ಗಂಡು ಮಕ್ಕಳನ್ನು ಕೊಂದು ಬಿಡುತ್ತಿದ್ದನು ಮತ್ತು ಅವರ ಸ್ತೀಯರನ್ನು ಬದುಕಿರಲು ಬಿಡುತ್ತಿದ್ದನು. ನಿಜವಾಗಿಯೂ ಅವನು ನೀತಿಗೆಟ್ಟ ಭ್ರಷ್ಟರ ಸಾಲಿಗೆ ಸೇರಿದವನಾಗಿದ್ದನು. {4}

وَنُرِيدُ أَنْ نَمُنَّ عَلَى الَّذِينَ اسْتُضْعِفُوا فِي الْأَرْضِ وَنَجْعَلَهُمْ أَئِمَّةً وَنَجْعَلَهُمُ الْوَارِثِينَ

ಹಾಗಿರುವಾಗ, ಆ ನಾಡಿನಲ್ಲಿ ಮರ್ದನಕ್ಕೊಳಗಾಗಿದ್ದವರ [ಅಂದರೆ ಫಿರ್‌ಔನ್ ನ ದುಷ್ಟತನಕ್ಕೆ ಗುರಿಯಾಗಿದ್ದ ಇಸ್ರಾಈಲ್ ಜನಾಂಗದ] ಮೇಲೆ ನಾವು ಔದಾರ್ಯ ತೋರಲು, ಅವರನ್ನು (ಧಾರ್ಮಿಕ) ಮುಖಂಡರನ್ನಾಗಿ ಮಾಡಲು ಮತ್ತು ನಾಡಿನ ಉತ್ತರಾಧಿಕಾರಿಗಳನ್ನಾಗಿ ಮಾಡಲು ಬಯಸಿದ್ದೆವು. {5}

وَنُمَكِّنَ لَهُمْ فِي الْأَرْضِ وَنُرِيَ فِرْعَوْنَ وَهَامَانَ وَجُنُودَهُمَا مِنْهُمْ مَا كَانُوا يَحْذَرُونَ

ನಂತರ ಅವರಿಗೆ ನಾವು ಭೂಮಿಯಲ್ಲಿ ಆಡಳಿತಾಧಿಕಾರ ದಯಪಾಲಿಸಿ; ಫಿರ್‌ಔನ್, ಹಾಮಾನ್ ಮತ್ತವರ ಸೇನೆಗಳು ಅವರಿಂದ [ಅರ್ಥಾತ್ ಮರ್ದನಕ್ಕೊಳಗಾಗಿದ್ದ ಇಸ್ರಾಈಲ್ ಜನತೆಯಿಂದ] ಏನನ್ನು ಭಯಪಡುತ್ತಿದ್ದರೋ ಅದನ್ನೇ ಅವರು ಕಾಣುವಂತೆ ಮಾಡಲು (ನಾವು ತೀರ್ಮಾನಿಸಿದ್ದೆವು). {6}

وَأَوْحَيْنَا إِلَىٰ أُمِّ مُوسَىٰ أَنْ أَرْضِعِيهِ ۖ فَإِذَا خِفْتِ عَلَيْهِ فَأَلْقِيهِ فِي الْيَمِّ وَلَا تَخَافِي وَلَا تَحْزَنِي ۖ إِنَّا رَادُّوهُ إِلَيْكِ وَجَاعِلُوهُ مِنَ الْمُرْسَلِينَ

ತರುವಾಯ [ಭಾವಿಯಲ್ಲಿ ಮೂಸಾ ರ ಜನನವಾದಾಗ ಅದು ಗಂಡು ಮಕ್ಕಳನ್ನು ಕೊಲ್ಲುವ ಕಾಲವಾದ್ದರಿಂದ] ನಾವು ದಿವ್ಯಸಂದೇಶದ ಮೂಲಕ ಮೂಸಾ ರವರ ತಾಯಿಗೆ ತಿಳಿಸಿದೆವು: ನೀವು ಆ (ಮಗುವಿಗೆ) ಹಾಲುಣಿಸುತ್ತಲಿರಿ, ಮತ್ತು ಮಗುವಿನ ಸುರಕ್ಷತೆಯ ಬಗ್ಗೆ ನಿಮಗೆ ಆತಂಕವಾದರೆ ಅದನ್ನು ನೀವು ಅ (ನೈಲ್) ನದಿಯಲ್ಲಿ ಬಿಟ್ಟು ಬಿಡಿ! ಭಯಪಡದಿರಿ, ದುಃಖಿಸುವ ಅಗತ್ಯವೂ ಇಲ್ಲ. ಏಕೆಂದರೆ ಅವನನ್ನು ಖಂಡಿತವಾಗಿ ನಾವು ನಿಮ್ಮ ಮಡಿಲಿಗೆ ಮರಳಿಸಲಿದ್ದೇವೆ, ಹಾಗೂ ಅವನನ್ನು (ನಮ್ಮ) ದೂತರುಗಳ ಸಾಲಿಗೆ ಸೇರಿಸಲಿದ್ದೇವೆ. {7}

فَالْتَقَطَهُ آلُ فِرْعَوْنَ لِيَكُونَ لَهُمْ عَدُوًّا وَحَزَنًا ۗ إِنَّ فِرْعَوْنَ وَهَامَانَ وَجُنُودَهُمَا كَانُوا خَاطِئِينَ

ಮುಂದೆ, ಫಿರ್‌ಔನ್ ನ ಮನೆಯವರು (ನದಿಯಲ್ಲಿ ತೇಲಿ ಬರುತ್ತಿದ್ದ) ಆ ಮಗುವನ್ನು ಎತ್ತಿಕೊಂಡು ಹೋದರು. ಪರಿಣಾಮವಾಗಿ, [ಅಲ್ಲಾಹ್ ನ ಯೋಜನೆಯಂತೆ] ಆ ಮಗು ಅವರ ಪಾಲಿಗೆ ಶತ್ರುವಾಯಿತು ಮತ್ತು ಅವರ ಅಳಲಿಗೆ ಕಾರಣವಾಯಿತು! ಫಿರ್‌ಔನ್, ಹಾಮಾನ್ ಮತ್ತು ಅವರ ಸೈನ್ಯಗಳು ನಿಜಕ್ಕೂ ತಪ್ಪಿತಸ್ಥರೇ ಆಗಿದ್ದರು. {8}

وَقَالَتِ امْرَأَتُ فِرْعَوْنَ قُرَّتُ عَيْنٍ لِي وَلَكَ ۖ لَا تَقْتُلُوهُ عَسَىٰ أَنْ يَنْفَعَنَا أَوْ نَتَّخِذَهُ وَلَدًا وَهُمْ لَا يَشْعُرُونَ

(ಮಗುವನ್ನು ಪಡಕೊಂಡ) ಫಿರ್‌ಔನ್ ನ ಮಡದಿ ಹೇಳಿದಳು: ನನ್ನ ಮತ್ತು ನಿನ್ನ ಕಣ್ಮನ ತಣಿಸಲಿರುವ ಮಗುವಿದು! ಇದನ್ನು ನೀನು ಕೊಲ್ಲದಿರು. ಏಕೆಂದರೆ ಇದು ನಮ್ಮ ಯಾವುದಾದರೂ ಪ್ರಯೋಜನಕ್ಕೆ ಬರಬಹುದು ಅಥವಾ ನಾವು ಇದನ್ನು ನಮ್ಮ ಪುತ್ರನಾಗಿ ಸ್ವೀಕರಿಸಬಹುದು! ಆದರೆ (ವಾಸ್ತವದಲ್ಲಿ ಅವರು ಮಾಡುತ್ತಿರುವುದೇನೆಂದು) ಅವರಿಗೆ ತಿಳಿದಿರಲಿಲ್ಲ! {9}

وَأَصْبَحَ فُؤَادُ أُمِّ مُوسَىٰ فَارِغًا ۖ إِنْ كَادَتْ لَتُبْدِي بِهِ لَوْلَا أَنْ رَبَطْنَا عَلَىٰ قَلْبِهَا لِتَكُونَ مِنَ الْمُؤْمِنِينَ

ಅತ್ತ ಮೂಸಾ ರ ತಾಯಿಯ ಹೃದಯದಲ್ಲಿ ಶೂನ್ಯತೆ ಆವರಿಸಿತ್ತಾ ಬಂತು. ಆಕೆ (ನಮ್ಮ ವಾಗ್ದಾನದಲ್ಲಿ) ಬಲವಾದ ವಿಶ್ವಾಸವುಳ್ಳವಳಾಗಿ ಉಳಿಯಲು ನಾವು ಆಕೆಯ ಹೃದಯಕ್ಕೆ ಬಲವೊದಗಿಸದಿದ್ದರೆ ಆಕೆ (ನಿಜ ಸಂಗತಿಯನ್ನು) ಬಹಿರಂಗ ಪಡಿಸಿಯೇ ಬಿಡುತ್ತಿದ್ದಳು! {10}

وَقَالَتْ لِأُخْتِهِ قُصِّيهِ ۖ فَبَصُرَتْ بِهِ عَنْ جُنُبٍ وَهُمْ لَا يَشْعُرُونَ

ಹಾಗಿರುವಾಗ, ಆಕೆ ಮೂಸಾ ರ ಸಹೋದರಿಯೊಡನೆ, ನೀನು ಈ ಮಗುವನ್ನು ಹಿಂಬಾಲಿಸಿ ಹೋಗಬೇಕೆಂದು ಕೋರಿದ್ದಳು. ಆದ್ದರಿಂದ ಆ ಸಹೋದರಿ ಮಗುವಿನ ಮೇಲೆ ಸ್ವಲ್ಪ ದೂರದಿಂದ ಕಣ್ಣಿಟ್ಟಿದ್ದಳು. ಅದು (ಫಿರ್‌ಔನ್ ನ ಪರಿವಾರದ) ಅರಿವಿಗೆ ಬಂದಿರಲಿಲ್ಲ. {11}

وَحَرَّمْنَا عَلَيْهِ الْمَرَاضِعَ مِنْ قَبْلُ فَقَالَتْ هَلْ أَدُلُّكُمْ عَلَىٰ أَهْلِ بَيْتٍ يَكْفُلُونَهُ لَكُمْ وَهُمْ لَهُ نَاصِحُونَ

ಆ ಮಗುವಿಗೆ ಹಾಣಿಸಲು ಸಾಧ್ಯವಾಗದಂತೆ ನಾವು (ಎಲ್ಲಾ) ದಾದಿಯರನ್ನು ಅದಾಗಲೇ ತಡೆದಿದ್ದೆವು. [ಹಾಗೆ ಮಗು ಎದೆಹಾಲು ಕುಡಿಯದಿದ್ದಾಗ] ಆ ಸಹೋದರಿ, ನಿಮಗಾಗಿ ಈ ಮಗುವಿನ ಪಾಲನೆ ಪೋಷಣೆ ಮಾಡಬಲ್ಲ ಮತ್ತು ಯೋಗಕ್ಷೇಮ ನೋಡಿಕೊಳ್ಳಬಲ್ಲ ಒಂದು ಕುಟುಂಬವನ್ನು ನಾನು ತೋರಿಸಿಕೊಡಲೇ ಎಂದು (ಫಿರ್‌ಔನ್ ನ ಪರಿವಾರದವರೊಡನೆ) ಕೇಳಿದಳು. {12}

فَرَدَدْنَاهُ إِلَىٰ أُمِّهِ كَيْ تَقَرَّ عَيْنُهَا وَلَا تَحْزَنَ وَلِتَعْلَمَ أَنَّ وَعْدَ اللَّهِ حَقٌّ وَلَٰكِنَّ أَكْثَرَهُمْ لَا يَعْلَمُونَ

ಹಾಗೆ ಮೂಸಾ ರ ತಾಯಿಯ ಕಣ್ಮನ ತಣಿಸಲೆಂದು, ಆಕೆ ದುಃಖಿಸದಿರಲೆಂದು ಮತ್ತು ಅಲ್ಲಾಹ್ ನು ಮಾಡಿದ ವಾಗ್ದಾನವು ಸತ್ಯವಾದುದೆಂದು ಆಕೆ ಅರಿತುಕೊಳ್ಳಲು ನಾವು ಆ ಮಗುವನ್ನು ಆಕೆಯ ಮಡಿಲಿಗೆ ಮರಳಿಸಿದೆವು. ಆದರೆ ಅವರ ಪೈಕಿಯ ಹೆಚ್ಚಿನವರಿಗೆ ಯಥಾರ್ಥ ತಿಳಿದಿರಲಿಲ್ಲ. {13}

وَلَمَّا بَلَغَ أَشُدَّهُ وَاسْتَوَىٰ آتَيْنَاهُ حُكْمًا وَعِلْمًا ۚ وَكَذَٰلِكَ نَجْزِي الْمُحْسِنِينَ

ಮಗು ಮೂಸಾ (ಫಿರ್‌ಔನ್ ನ ಪರಿವಾರದವರ ಜೊತೆ) ಬೆಳೆದು ತನ್ನ ಪ್ರೌಢಾವಸ್ಥೆಗೆ ತಲಪಿದಾಗ, ಪ್ರಬುದ್ಧವಾದಾಗ, ನಾವು ಅವರಿಗೆ ಜಾಣ್ಮೆಯನ್ನೂ ಅರಿವನ್ನೂ ದಯಪಾಲಿಸಿದೆವು. ಸಜ್ಜನಿಕೆಯನ್ನು ಮೈಗೂಡಿಸಿಕೊಂಡವರಿಗೆ ನಾವು ಪುರಸ್ಕಾರ ನೀಡುವುದು ಹಾಗೆಯೇ! {14}

وَدَخَلَ الْمَدِينَةَ عَلَىٰ حِينِ غَفْلَةٍ مِنْ أَهْلِهَا فَوَجَدَ فِيهَا رَجُلَيْنِ يَقْتَتِلَانِ هَٰذَا مِنْ شِيعَتِهِ وَهَٰذَا مِنْ عَدُوِّهِ ۖ فَاسْتَغَاثَهُ الَّذِي مِنْ شِيعَتِهِ عَلَى الَّذِي مِنْ عَدُوِّهِ فَوَكَزَهُ مُوسَىٰ فَقَضَىٰ عَلَيْهِ ۖ قَالَ هَٰذَا مِنْ عَمَلِ الشَّيْطَانِ ۖ إِنَّهُ عَدُوٌّ مُضِلٌّ مُبِينٌ

ಒಮ್ಮೆ ಪಟ್ಟಣದ ಜನರು ಲಘುನಿದ್ರೆಯಲ್ಲಿದ್ದಾಗ ಮೊಸಾ ರು ಪಟ್ಟಣಕ್ಕೆ ಪ್ರವೇಶಿಸಿದರು. ಆಗ ಅಲ್ಲಿ ಇಬ್ಬರು ವ್ಯಕ್ತಿಗಳು ಹೊಡೆದಾಡುತ್ತಿರುವುದನ್ನು ಅವರು ಕಂಡರು; ಅವರಲ್ಲಿ ಒಬ್ಬನು ತನ್ನ ಪಂಗಡವನೂ ಇನ್ನೊಬ್ಬನು ಶತ್ರು ಪಂಗಡದನೂ ಆಗಿರುವುದನ್ನು ಗುರುತಿಸಿಕೊಂಡರು. ಶತ್ರು ಪಂಗಡದವನ ವಿರುದ್ಧ ಅವರ ಪಂಗಡವನು ಅವರೊಂದಿಗೆ ಸಹಾಯ ಯಾಚಿಸಿದನು. ಕೂಡಲೇ ಅವರು ಶತ್ರು ಪಂಗಡದವನ ಮೇಲೆ ಮುಷ್ಠಿ ಪ್ರಹಾರ ನಡೆಸಿದರು. ಅಲ್ಲಿಗೆ ಆತನ ಕಥೆ ಮುಗಿದೇ ಬಿಟ್ಟಿತು! ಮೂಸಾ ರು (ತಮ್ಮೊಳಗೇ), ಇದು ಸೈತಾನನ ಕ್ರುತ್ಯವಾಯಿತು; ಅವನಾದರೋ ಜನರ ದಾರಿಗೆಡಿಸುವ ಒಬ್ಬ ಬಹಿರಂಗ ಶತ್ರುವೇ ಸರಿ ಎಂದು ಹೇಳಿಕೊಂಡರು. {15}

قَالَ رَبِّ إِنِّي ظَلَمْتُ نَفْسِي فَاغْفِرْ لِي فَغَفَرَ لَهُ ۚ إِنَّهُ هُوَ الْغَفُورُ الرَّحِيمُ

ಓ ನನ್ನ ಪಾಲಕನೇ, ನಾನು ನನ್ನ ಮೇಲೆಯೇ ಅನ್ಯಾಯ ಮಾಡಿದ್ದೇನೆ; ಆದ್ದರಿಂದ ನನ್ನನ್ನು ಕ್ಷಮಿಸು ಎಂದು ಪ್ರಾರ್ಥಿಸಿದರು. ಮತ್ತು ಅಲ್ಲಾಹ್ ನು ಅವರನ್ನು ಕ್ಷಮಿಸಿದನು. ಹೌದು, ಅವನು ಬಹಳವಾಗಿ ಕ್ಷಮಿಸುವವನೂ ಹೆಚ್ಚು ದಯೆ ತೋರುವವನೂ ಆಗುರುವನು. {16}

قَالَ رَبِّ بِمَا أَنْعَمْتَ عَلَيَّ فَلَنْ أَكُونَ ظَهِيرًا لِلْمُجْرِمِينَ

ಅವರು ಹೇಳಿದರು, ಓ ನನ್ನ ಪ್ರಭುವೇ, ನನ್ನನ್ನು ನೀನು ಹೀಗೆ ಅನುಗ್ರಹಿಸಿದ ಕಾರಣ ಮುಂದೆಂದೂ ನಾನು ದುಷ್ಟರನ್ನು ಬೆಂಬಲಿಸಲಾರೆ. {17}

فَأَصْبَحَ فِي الْمَدِينَةِ خَائِفًا يَتَرَقَّبُ فَإِذَا الَّذِي اسْتَنْصَرَهُ بِالْأَمْسِ يَسْتَصْرِخُهُ ۚ قَالَ لَهُ مُوسَىٰ إِنَّكَ لَغَوِيٌّ مُبِينٌ

ಮರುದಿನ ಬೆಳಗಾಗುತ್ತಿದ್ದಂತೆ ಮೂಸಾ ರು ಪಟ್ಟಣದಲ್ಲಿ (ಹಿಂದಿನ ದಿನದ ಘಟನೆಯ ಬಗ್ಗೆ) ಸ್ವಲ್ಪ ಭಯಪಡುತ್ತಾ ಪರಿಸ್ಥಿತಿಯನ್ನು ಅವಲೋಕಿಸುತ್ತಾ ನಡೆಯುತ್ತಿರುವಾಗ, ಹಿಂದಿನ ದಿನ ಸಹಾಯಕ್ಕಾಗಿ ಮೊರೆಯಿಟ್ಟ ಅದೇ ವ್ಯಕ್ತಿ ಇಂದು ಪುನಃ [ಮತ್ತೊಬ್ಬನೊಂದಿಗೆ ಹೊಡೆದಾಡಿ] ಸಹಾಯಕ್ಕಾಗಿ ತನ್ನನು ಕರೆಯುತ್ತಿರುವುದನ್ನು ಕಂಡರು! ಆಗ ಮೂಸಾ ರು ಅವನೊಂದಿಗೆ, ನಿಜವಾಗಿ ನೀನು ತಪ್ಪು ದಾರಿಯಲ್ಲಿರುವ ಒಬ್ಬ ಸ್ಪಷ್ಟ ದುಷ್ಟನಾಗಿರುವೆ ಎಂದು ಹೇಳಿದರು. {18}

فَلَمَّا أَنْ أَرَادَ أَنْ يَبْطِشَ بِالَّذِي هُوَ عَدُوٌّ لَهُمَا قَالَ يَا مُوسَىٰ أَتُرِيدُ أَنْ تَقْتُلَنِي كَمَا قَتَلْتَ نَفْسًا بِالْأَمْسِ ۖ إِنْ تُرِيدُ إِلَّا أَنْ تَكُونَ جَبَّارًا فِي الْأَرْضِ وَمَا تُرِيدُ أَنْ تَكُونَ مِنَ الْمُصْلِحِينَ

ಮತ್ತು ಅವರು ಅವರಿಬ್ಬರಿಗೂ ಶತ್ರುವಾಗಿದ್ದ ವ್ಯಕ್ತಿಯನ್ನು ಹಿಡಿಯಲು ಉದ್ದೇಶಿಸಿದಾಗ ಆತ ಹೇಳಿದನು: ಓ ಮೂಸಾ, ನಿನ್ನೆ ಒಬ್ಬನನ್ನು ನೀನು ಕೊಂದು ಬಿಟ್ಟಂತೆ ನನ್ನನ್ನೂ ಈಗ ಕೊಲ್ಲುವೆಯಾ? ನೀನು ಒಬ್ಬ ಸುಧಾರಕನಾಗಲು ಬಯಸುವ ಬದಲು ನಾಡಿನಲ್ಲಿ ಒಬ್ಬ ದಬ್ಬಾಳಿಕೆ ನಡೆಸುವವನಾಗಿರಲು ಬಯಸುತ್ತಿರುವೆ. {19}

وَجَاءَ رَجُلٌ مِنْ أَقْصَى الْمَدِينَةِ يَسْعَىٰ قَالَ يَا مُوسَىٰ إِنَّ الْمَلَأَ يَأْتَمِرُونَ بِكَ لِيَقْتُلُوكَ فَاخْرُجْ إِنِّي لَكَ مِنَ النَّاصِحِينَ

ಅಷ್ಟೊತ್ತಿಗೆ ಒಬ್ಬ ವ್ಯಕ್ತಿಯು ಪಟ್ಟಣದ ದೂರದ ಭಾಗದಿಂದ ಓಡೋಡಿ ಬಂದು, ಓ ಮೂಸಾ, (ಫಿರ್‌ಔನ್ ನ ಆಸ್ಥಾನದ) ಮುಖ್ಯಸ್ಥರು ನಿಮಗೆ ಮರಣ ದಂಡನೆ ನೀಡುವ ಕುರಿತು ಸಮಾಲೋಚಲು ಒಟ್ಟು ಸೇರಿರುತ್ತಾರೆ; ಆದ್ದರಿಂದ ನೀವು ಈ ಪಟ್ಟಣದಿಂದ ಹೊರಟು ಹೋಗಿರಿ; ನಿಜವಾಗಿಯೂ ನಾನು ನಿಮ್ಮ ಹಿತಚಿಂತಕನೇ ಆಗಿರುವೆ ಎಂದು ಹೇಳಿದನು. {20}

فَخَرَجَ مِنْهَا خَائِفًا يَتَرَقَّبُ ۖ قَالَ رَبِّ نَجِّنِي مِنَ الْقَوْمِ الظَّالِمِينَ

ಹಾಗೆ ಮೂಸಾ ರು ಭಯಪಡುತ್ತಾ ಸ್ವಲ್ಪ ಎಚ್ಚರಿಕೆ ವಹಿಸುತ್ತಾ ಅಲ್ಲಿಂದ ಹೊರಟು ಹೋದರು. ಓ ನನ್ನ ಪ್ರಭುವೇ, ಈ ದುಷ್ಕರ್ಮಿ ಜನರಿಂದ ನನ್ನನ್ನು ರಕ್ಷಿಸು ಎಂದು ಪ್ರಾರ್ಥಿಸಿಕೊಂಡರು. {21}

وَلَمَّا تَوَجَّهَ تِلْقَاءَ مَدْيَنَ قَالَ عَسَىٰ رَبِّي أَنْ يَهْدِيَنِي سَوَاءَ السَّبِيلِ

ಅಲ್ಲಿಂದ ಹೊರ ಬಿದ್ದು ಮದ್‌ಯನ್ ಗ್ರಾಮದ ನೇರಕ್ಕೆ ಅವರು ಪ್ರಯಾಣಿಸುವಾಗ, ನನಗೆ ನನ್ನ ಪ್ರಭು ನೇರವಾದ ಮಾರ್ಗವನ್ನೇ ತೋರಿಸಿ ಕೊಟ್ಟಾನು ಎಂದು ಭರವಸೆ ವ್ಯಕ್ತ ಪಡಿಸಿದರು. {22}

وَلَمَّا وَرَدَ مَاءَ مَدْيَنَ وَجَدَ عَلَيْهِ أُمَّةً مِنَ النَّاسِ يَسْقُونَ وَوَجَدَ مِنْ دُونِهِمُ امْرَأَتَيْنِ تَذُودَانِ ۖ قَالَ مَا خَطْبُكُمَا ۖ قَالَتَا لَا نَسْقِي حَتَّىٰ يُصْدِرَ الرِّعَاءُ ۖ وَأَبُونَا شَيْخٌ كَبِيرٌ

ಹಾಗೆ, ಅವರು ಮದ್‌ಯನ್ ಗ್ರಾಮದ ಒಂದು ಬಾವಿಯ ಬಳಿಗೆ ತಲುಪಿದಾಗ ಅಲ್ಲಿ (ತಮ್ಮ ಜಾನುವಾರುಗಳಿಗೆ) ನೀರು ಕುಡಿಸುತ್ತಿದ್ದ ಒಂದು ಗುಂಪು ಜನರನ್ನು ಕಂಡರು. ಅದಲ್ಲದೆ (ಸ್ವಲ್ಪ ದೂರದಲ್ಲಿ) ಇಬ್ಬರು ಯುವತಿಯರು ತಮ್ಮ ಜಾನುವಾರುಗಳನ್ನು (ಅವು ನೀರಿನತ್ತ ನುಗ್ಗದಂತೆ) ತಡೆದಿಟ್ಟಿರುವುದನ್ನೂ ಕಂಡರು. ಆಗ ಮೂಸಾ ರು ಆ ಯುವತಿಯರೊಡನೆ ನಿಮಗೇನು ತೊಂದರೆಯಾಗಿದೆ ಎಂದು ವಿಚಾರಿಸಿದರು. ಈ ಕುರುಬರು (ತಮ್ಮ ಜಾನುವಾರುಗಳಿಗೆ ನೀರು ಕುಡಿಸಿ ಅವನ್ನು) ಇಲ್ಲಿಂದ ಕೊಂಡೊಯ್ಯುವ ತನಕ ನಾವು (ನಮ್ಮ ಜಾನುವಾರುಗಳಿಗೆ) ನೀರು ಕುಡಿಸುವಂತಿಲ್ಲವೆಂದೂ, (ಈ ಕೆಲಸಕ್ಕೆ ನಾವೇ ಬರಬೇಕಾಗಿದೆ, ಏಕೆಂದರೆ) ನಮ್ಮ ತಂದೆಯವರಿಗೆ ತುಂಬಾ ಪ್ರಾಯವಾಗಿದೆ ಎಂದೂ ಯುವತಿಯರು ಹೇಳಿಕೊಂಡರು. {23}

فَسَقَىٰ لَهُمَا ثُمَّ تَوَلَّىٰ إِلَى الظِّلِّ فَقَالَ رَبِّ إِنِّي لِمَا أَنْزَلْتَ إِلَيَّ مِنْ خَيْرٍ فَقِيرٌ

ಆಗ ಮೂಸಾ ರು ಅವರ ಜಾನುವಾರುಗಳಿಗೆ ನೀರು ಕುಡಿಸಿದರು ಮತ್ತು (ಸ್ವಲ್ಪ ವಿಶ್ರಾಂತಿ ಪಡೆಯಲು) ನೆರಳಿದ್ದ ಕಡೆಗೆ ಹೋದರು. ಓ ನನ್ನ ಪ್ರಭುವೇ, ಹಿತಕಾರಿಯಾದ ಏನನ್ನು ನೀನು ನನ್ನತ್ತ ಕಳುಹಿಸಿದರೂ ಅದುವೇ ನನ್ನ ಅವಶ್ಯಕತೆಯಾಗಿದೆ ಎಂದು ಪ್ರಾರ್ಥಿಸಿಕೊಂಡರು. {24}

فَجَاءَتْهُ إِحْدَاهُمَا تَمْشِي عَلَى اسْتِحْيَاءٍ قَالَتْ إِنَّ أَبِي يَدْعُوكَ لِيَجْزِيَكَ أَجْرَ مَا سَقَيْتَ لَنَا ۚ فَلَمَّا جَاءَهُ وَقَصَّ عَلَيْهِ الْقَصَصَ قَالَ لَا تَخَفْ ۖ نَجَوْتَ مِنَ الْقَوْمِ الظَّالِمِينَ

ಸ್ವಲ್ಪದರಲ್ಲಿಯೇ ಆ ಇಬ್ಬರು ಯುವತಿಯರಲ್ಲಿ ಒಬ್ಬಾಕೆ ಅವರ ಬಳಿಗೆ ಲಜ್ಜಿಸುತ್ತಾ ನಡೆದು ಬಂದು, ನೀವು ನಮ್ಮ (ಜಾನುವಾರುಗಳಿಗೆ) ನೀರು ಕುಡಿಸಿದ್ದಕ್ಕಾಗಿ ನಿಮಗೆ ಪ್ರತಿಫಲ ನೀಡಲು ನಮ್ಮ ತಂದೆಯವರು ನಿಮ್ಮನ್ನು ಕರೆಯುತ್ತಿದ್ದಾರೆ ಎಂದು ಹೇಳಿದಳು. ಆಗ ಮೂಸಾ ರು (ಯುವತಿಯ ತಂದೆಯ) ಬಳಿಗೆ ಹೋದರು ಮತ್ತು (ತನಗೆ ಈಜಿಪ್ಟ್ ದೇಶದಲ್ಲಿ) ಸಂಭಸಿದ ಎಲ್ಲಾ ಸಮಾಚಾರವನ್ನು ವಿವರಿಸಿದರು. ಅದಕ್ಕೆ, ಇನ್ನು ನೀವು ಭಯಪಡದಿರಿ. ಏಕೆಂದರೆ ಆ ದುಷ್ಕರ್ಮಿ ಜನರಿಂದ ನೀವು ಪಾರಾಗಿರುವಿರಿ ಎಂದು (ಆ ವೃದ್ಧ ವ್ಯಕ್ತಿ) ಹೇಳಿದರು. {25}

قَالَتْ إِحْدَاهُمَا يَا أَبَتِ اسْتَأْجِرْهُ ۖ إِنَّ خَيْرَ مَنِ اسْتَأْجَرْتَ الْقَوِيُّ الْأَمِينُ

ಆ ಇಬ್ಬರು (ಹೆಣ್ಣು ಮಕ್ಕಳಲ್ಲಿ) ಒಬ್ಬಾಕೆ ಹೇಳಿದಳು: ತಂದೆಯವರೇ, ಈತನನ್ನು ನೀವು ನೌಕರನಾಗಿ ನೇಮಿಸಿಕೊಳ್ಳಿ; ಒಬ್ಬ ಗಟ್ಟಿಗನೂ ನಂಬಿಕೆಗೆ ಅರ್ಹನೂ ಆದವನು ಮಾತ್ರವೇ ನೀವು ನೌಕರನಾಗಿ ನೇಮಿಸಬಹುದಾದವರಲ್ಲಿ ನಿಜವಾಗಿ ಉತ್ತಮನು! {26}

قَالَ إِنِّي أُرِيدُ أَنْ أُنْكِحَكَ إِحْدَى ابْنَتَيَّ هَاتَيْنِ عَلَىٰ أَنْ تَأْجُرَنِي ثَمَانِيَ حِجَجٍ ۖ فَإِنْ أَتْمَمْتَ عَشْرًا فَمِنْ عِنْدِكَ ۖ وَمَا أُرِيدُ أَنْ أَشُقَّ عَلَيْكَ ۚ سَتَجِدُنِي إِنْ شَاءَ اللَّهُ مِنَ الصَّالِحِينَ

(ಆ ವೃದ್ದ ವ್ಯಕ್ತಿಯು ಮೂಸಾ ರೊಂದಿಗೆ) ಹೇಳಿದರು: ನೀವು ಎಂಟು ವರ್ಷ ನನ್ನಲ್ಲಿ ನೌಕರಿ ಮಾಡಲು ಸಿದ್ಧವಿದ್ದರೆ ನನ್ನ ಈ ಇಬ್ಬರು ಹೆಣ್ಣುಮಕ್ಕಳ ಪೈಕಿ ಒಬ್ಬಳನ್ನು ನಾನು ನಿಮಗೆ ವಿವಾಹ ಮಾಡಿ ಕೊಡಲು ಇಚ್ಛಿಸಿದ್ದೇನೆ. ಇನ್ನು ನೀವು ಹತ್ತು ವರ್ಷ ಪೂರ್ತಿ ಮಾಡಿದರೆ ಅದು ನಿಮ್ಮಿಷ್ಟ! ನಿಮಗೆ ತೊಂದರೆ ಕೊಡಲಂತು ನಾನು ಉದ್ದೇಶಿಸುವುದಿಲ್ಲ. ಅಲ್ಲಾಹ್ ನು ಬಯಸಿದರೆ ನೀವು ನನ್ನನ್ನು ಒಬ್ಬ ನೀತಿವಂತನಾಗಿ ಕಾಣುವಿರಿ. {27}

قَالَ ذَٰلِكَ بَيْنِي وَبَيْنَكَ ۖ أَيَّمَا الْأَجَلَيْنِ قَضَيْتُ فَلَا عُدْوَانَ عَلَيَّ ۖ وَاللَّهُ عَلَىٰ مَا نَقُولُ وَكِيلٌ

ಮೂಸಾ ಹೇಳಿದರು: ಇದು ನನ್ನ ಮತ್ತು ನಿಮ್ಮ ನಡುವಿನ ಒಪ್ಪಂದವಾಗಿದೆ. ಆ ಎರಡು ಅವಧಿಗಳಲ್ಲಿ ಯಾವುದನ್ನು ನಾನು ಪೂರ್ತಿಗೊಳಿಸಿದರೂ ನನ್ನ ಮೇಲೆ ಅದಕ್ಕಿಂತ ಹೆಚ್ಚಿನ ಹೊರೆ ಬರಕೂಡದು. ನಮ್ಮ ಈ ಮಾತುಗಳಿಗೆ ಅಲ್ಲಾಹ್ ನು ಸಾಕ್ಷಿಯಾಗಿರುವನು! {28}

فَلَمَّا قَضَىٰ مُوسَى الْأَجَلَ وَسَارَ بِأَهْلِهِ آنَسَ مِنْ جَانِبِ الطُّورِ نَارًا قَالَ لِأَهْلِهِ امْكُثُوا إِنِّي آنَسْتُ نَارًا لَعَلِّي آتِيكُمْ مِنْهَا بِخَبَرٍ أَوْ جَذْوَةٍ مِنَ النَّارِ لَعَلَّكُمْ تَصْطَلُونَ

ಹಾಗೆ ಮೂಸಾ ರು ಆ ಕಾಲಾವಧಿಯನ್ನು ಪೂರ್ತಿಗೊಳಿಸಿ ತಮ್ಮ ಕುಟುಂಬದೊಂದಿಗೆ ಹೊರಟು ಪ್ರಯಾಣದಲ್ಲಿದ್ದಾಗ ತೂರ್ ಬೆಟ್ಟದ ಪಕ್ಕದಲ್ಲಿ ಒಂದು ಬೆಂಕಿಯನ್ನು ಕಂಡರು. ಆಗ ಅವರು ತಮ್ಮ ಕುಟುಂಬದವರೊಡನೆ, ನೀವು ಇಲ್ಲೇ ಇರಿ; ನಾನು ಅಲ್ಲಿ ಬೆಂಕಿಯನ್ನು ಕಂಡಿರುತ್ತೇನೆ; ನಿಮಗೆ (ಉಪಯುಕ್ತವಾಗುವ) ಏನಾದರೂ ಮಾಹಿತಿಯನ್ನು ಅಲ್ಲಿಂದ ತರಲು ನನಗೆ ಸಾಧ್ಯವಾದೀತು. ಅಥವಾ ಬೆಂಕಿಯ ಕೆಂಡವನ್ನಾದರೂ ತರುತ್ತೇನೆ. ನೀವು ಚಳಿ ಕಾಯಿಸಿಕೊಳ್ಳಬಹು ಎಂದು ಹೇಳಿದರು. {29}

فَلَمَّا أَتَاهَا نُودِيَ مِنْ شَاطِئِ الْوَادِ الْأَيْمَنِ فِي الْبُقْعَةِ الْمُبَارَكَةِ مِنَ الشَّجَرَةِ أَنْ يَا مُوسَىٰ إِنِّي أَنَا اللَّهُ رَبُّ الْعَالَمِينَ

ಕೊನೆಗೆ ಮೂಸಾ ರು ಅಲ್ಲಿಗೆ ತಲುಪಿದಾಗ, ಆ ಅನುಗ್ರಹೀತ ಭೂಭಾಗದ ಒಂದು ಕಣಿವೆಯ ಬಲ ಮಗ್ಗಲಿನಲ್ಲಿದ್ದ ಗಿಡವೊಂದರಿಂದ ಅವರನ್ನು ಕರೆಯಲಾಯಿತು: ಓ ಮೂಸಾ, ಇಡೀ ವಿಶ್ವದ ಪ್ರಭುವಾದ ಅಲ್ಲಾಹ್ ನು ನಾನೇ ಆಗಿರುವೆನು! {30}

وَأَنْ أَلْقِ عَصَاكَ ۖ فَلَمَّا رَآهَا تَهْتَزُّ كَأَنَّهَا جَانٌّ وَلَّىٰ مُدْبِرًا وَلَمْ يُعَقِّبْ ۚ يَا مُوسَىٰ أَقْبِلْ وَلَا تَخَفْ ۖ إِنَّكَ مِنَ الْآمِنِينَ

ಮತ್ತು ನಿಮ್ಮ ಊರುಗೋಲನ್ನು ಕೆಳಗೆ ಹಾಕಿ ಬಿಡಿರಿ ಎಂದು ಆಜ್ಞಾಪಿಸಲಾಯಿತು. ಹಾಗೆ (ಕೆಳಗೆ ಬಿದ್ದ ಊರುಗೋಲು) ಹಾವಿನಂತೆ ಚುರುಕಾಗಿ ಹರಿದಾಡುವುದನ್ನು ಕಂಡು ಅವರು ಬೆನ್ನು ತಿರುಗಿಸಿ ಅಲ್ಲಿಂದ ಓಟ ಕಿತ್ತರು. ಹಿಂದಿರುಗಿ ನೋಡಲೂ ಇಲ್ಲ! (ಅಲ್ಲಾಹ್ ನು ಹೇಳಿದನು): ಓ ಮೂಸಾ, ನೀವು ಹೆದರದಿರಿ! ಬದಲಾಗಿ ಮುಂದಕ್ಕೆ ಬನ್ನಿರಿ; ನೀವು ಬಹಳ ಸುರಕ್ಷಿತರಾಗಿರುವಿರಿ! {31}

اسْلُكْ يَدَكَ فِي جَيْبِكَ تَخْرُجْ بَيْضَاءَ مِنْ غَيْرِ سُوءٍ وَاضْمُمْ إِلَيْكَ جَنَاحَكَ مِنَ الرَّهْبِ ۖ فَذَانِكَ بُرْهَانَانِ مِنْ رَبِّكَ إِلَىٰ فِرْعَوْنَ وَمَلَئِهِ ۚ إِنَّهُمْ كَانُوا قَوْمًا فَاسِقِينَ

ಈಗ ನಿಮ್ಮ ಕೈಯನ್ನು ಜೇಬಿನೊಳಗೆ ತುರುಕಿರಿ. ಅದು ದೋಷಕರವಲ್ಲದ ರೀತಿಯಲ್ಲಿ ಬಿಳುಪಾಗಿ (ಹೊಳೆಯುತ್ತಾ) ಹೊರಬರುವುದು. (ನಿಮಗುಂಟಾಗಬಹುದಾದ) ಭಯವನ್ನು ದೂರೀಕರಿಸಲು ತಮ್ಮ ತೋಳುಗಳನ್ನು ಬಿಗಿಯಾಗಿ ತಮ್ಮತ್ತ ಸೇರಿಸಿಕೊಳ್ಳಿರಿ. ಅವು ಫಿರ್‌ಔನ್ ಮತ್ತು ಅವನ ಆಸ್ಥಾನದ ಮುಖ್ಯಸ್ಥರಿಗೆ (ತೋರಿಸಲು) ನಿಮ್ಮ ಪ್ರಭುವಿನ ಕಡೆಯಿಂದಿರುವ ಎರಡು ಪುರಾವೆಗಳು! ಖಂಡಿತವಾಗಿ ಅವರೆಲ್ಲರೂ ಎಲ್ಲೆಮೀರಿದವರಾಗಿದ್ದಾರೆ. {32}

قَالَ رَبِّ إِنِّي قَتَلْتُ مِنْهُمْ نَفْسًا فَأَخَافُ أَنْ يَقْتُلُونِ

ಅದಕ್ಕೆ ಮೂಸಾ ಹೇಳಿದರು: ಓ ನನ್ನ ದೇವನೇ, ನಾನು ಅವರ ಪೈಕಿಯ ಒಬ್ಬ ವ್ಯಕ್ತಿಯನ್ನು (ಆಕಸ್ಮಿಕವಾಗಿ) ಕೊಂದಿರುವೆನು. ಆದ್ದರಿಂದ ಅವರು ನನ್ನನ್ನು ಕೊಂದು ಬಿಡುವರೋ ಎಂಬ ಭಯ ನನಗಿದೆ. {33}

وَأَخِي هَارُونُ هُوَ أَفْصَحُ مِنِّي لِسَانًا فَأَرْسِلْهُ مَعِيَ رِدْءًا يُصَدِّقُنِي ۖ إِنِّي أَخَافُ أَنْ يُكَذِّبُونِ

ಹಾಗಿರುವಾಗ, ನನಗಿಂತ ಹೆಚ್ಚು ನಿರರ್ಗಳವಾಗಿ ಮಾತನಾಡಬಲ್ಲ ನನ್ನ ಸಹೋದರರಾದ ಹಾರೂನ್ ರನ್ನು ನನ್ನ ಸಹಾಯಕ್ಕಾಗಿ ನನ್ನ ಜೊತೆ ಕಳುಹಿಸಿಕೊಡು. (ತಮ್ಮ ಮಾತುಗಾರಿಕೆಯ ಮೂಲಕ) ಅವರು ನನ್ನ ಮಾತುಗಳನ್ನು ಸಮರ್ಥಿಸಲಿ. ಫಿರ್‌ಔನ್ ಮತ್ತು ಆತನ ಕಡೆಯವರು ನನ್ನನ್ನು ತಿರಸ್ಕರಿಸಿಯಾರು ಎಂಬ ಆತಂಕವೂ ನನಗಿದೆ! {34}

قَالَ سَنَشُدُّ عَضُدَكَ بِأَخِيكَ وَنَجْعَلُ لَكُمَا سُلْطَانًا فَلَا يَصِلُونَ إِلَيْكُمَا ۚ بِآيَاتِنَا أَنْتُمَا وَمَنِ اتَّبَعَكُمَا الْغَالِبُونَ

ಅಲ್ಲಾಹ್ ನು ಉತ್ತರಿಸಿದನು: (ಮೂಸಾ, ನೀವು ಚಿಂತಿಸಬೇಡಿ, ಏಕೆಂದರೆ) ನಿಮ್ಮ ಸಹೋದರನ ಮೂಲಕ ನಾವು ನಿಮ್ಮ ಕೈ ಬಲಪಡಿಸಲಿದ್ದೇವೆ. ನಿಮ್ಮಿಬ್ಬರ ಹತ್ತಿರವೂ (ಫಿರ್‌ಔನ ನ) ಜನರು ಬಾರದಂತೆ ನಾವು ನಿಮಗೆ ಮಹಾ ಶಕ್ತಿ ಒದಗಿಸಲಿದ್ದೇವೆ. ನಮ್ಮ ದೃಷ್ಟಾಂತಗಳ ಸಮೇತ (ನೀವು ಆ ದುಷ್ಟರ ಬಳಿಗೆ ಹೋಗಿರಿ. ಏಕೆಂದರೆ), ನಿಮಗೆ ಹಾಗೂ ನಿಮ್ಮಬ್ಬರನ್ನು ಅನುಸರಿಸುವವರಿಗೆ ಮಾತ್ರ ಮೇಲುಗೈ ಸಿದ್ಧಿಯಾಗಲಿದೆ. {35}

فَلَمَّا جَاءَهُمْ مُوسَىٰ بِآيَاتِنَا بَيِّنَاتٍ قَالُوا مَا هَٰذَا إِلَّا سِحْرٌ مُفْتَرًى وَمَا سَمِعْنَا بِهَٰذَا فِي آبَائِنَا الْأَوَّلِينَ

ಹಾಗೆ, ನಾವು ನೀಡಿದ ಬಹಳ ಸ್ಪಷ್ಟವಾದ ದೃಷ್ಟಾಂತಗಳೊಂದಿಗೆ ಪ್ರವಾದಿ ಮೂಸಾ ಆ (ದುಷ್ಟರ) ಬಳಿಗೆ ಬಂದಾಗ, ಇವೆಲ್ಲ ಸ್ವತಃ ನೀವೇ ಉಂಟುಮಾಡಿ ತಂದ ಜಾದೂಗಾರಿಗೆಯಲ್ಲದೆ ಇನ್ನೇನೂ ಅಲ್ಲ; ನಮ್ಮ ಮುಂಚಿನವರಾದ ನಮ್ಮ ತಾತಮುತ್ತಾತಂದಿರಿಂದ (ನೀವು ಸಾರುತ್ತಿರುವ ಈ ಏಕದೇವತ್ವದ) ವಿಷಯವಾಗಿ ನಾವು ಕೇಳಿಯೂ ಇಲ್ಲ ಎಂದು ಹೇಳಿ [ಫಿರ್‌ಔನ್ ಮತ್ತು ಆತನ ಜನರು ಮೂಸಾ ರನ್ನು ತಿರಸ್ಕರಿಸಿ] ಬಿಟ್ಟರು. {36}

وَقَالَ مُوسَىٰ رَبِّي أَعْلَمُ بِمَنْ جَاءَ بِالْهُدَىٰ مِنْ عِنْدِهِ وَمَنْ تَكُونُ لَهُ عَاقِبَةُ الدَّارِ ۖ إِنَّهُ لَا يُفْلِحُ الظَّالِمُونَ

ಪ್ರವಾದಿ ಮೂಸಾ ಉತ್ತರಿಸಿದರು: ಯಾರು ತನ್ನ ಕಡೆಯಿಂದ ಸರಿದಾರಿ ತೋರಿಸಲು ಬಂದವರು ಮತ್ತು ಅಂತಿಮವಾಗಿ ಯಾರಿಗೆ (ಪರಲೋಕದ) ಬಿಡಾರ ಪ್ರಾಪ್ತಿಯಾಗಲಿದೆ ಎಂಬುದು ನನ್ನ ಪರಿಪಾಲಕನಾದ (ಅಲ್ಲಾಹ್ ನಿಗೆ) ಚೆನ್ನಾಗಿ ತಿಳಿದಿದೆ. ನಿಜವಾಗಿಯೂ ದುಷ್ಟ ಜನರು (ಅಲ್ಲಿ) ವಿಜಯಿಗಳಾಗಲಾರರು. {37}

وَقَالَ فِرْعَوْنُ يَا أَيُّهَا الْمَلَأُ مَا عَلِمْتُ لَكُمْ مِنْ إِلَٰهٍ غَيْرِي فَأَوْقِدْ لِي يَا هَامَانُ عَلَى الطِّينِ فَاجْعَلْ لِي صَرْحًا لَعَلِّي أَطَّلِعُ إِلَىٰ إِلَٰهِ مُوسَىٰ وَإِنِّي لَأَظُنُّهُ مِنَ الْكَاذِبِينَ

ನನ್ನ ಆಸ್ಥಾನದ ಮುಖ್ಯಸ್ಥರೇ, ನನ್ನ ಹೊರತು ನಿಮಗೆ ಬೇರೆ ದೇವರಿರುವ ವಿಷಯ ನನಗಂತೂ ತಿಳಿಯದು. ಓ ಹಾಮಾನ್, ನೀನೀಗ ಮಣ್ಣು ಬೇಯಿಸಿ (ಇಟ್ಟಿಗೆಗಳನ್ನು ಮಾಡಿ) ಅದರಿಂದ ನಂಗೊಂದು ಎತ್ತರದ ಗೋಪುರವನ್ನು ನಿರ್ಮಿಸು; ಏಕೆಂದರೆ ಅದನ್ನೇರಿ ನಾನು ಮೂಸಾ ರ ದೇವನ ಕಡೆಗೆ ನೋಡ ಬಹುದು. ನಾನಂತು ಈತನನ್ನು ಒಬ್ಬ ಸುಳ್ಳುಗಾರನೆಂದೇ ಭಾವಿಸುತ್ತೇನೆ ಎಂದು ಫಿರ್‌ಔನ್ [ಸಂಭಾಷಣೆಯ ನಡುವೆ ಅಹಂಕಾರದಿಂದ] ಹೇಳಿದನು. {38}

وَاسْتَكْبَرَ هُوَ وَجُنُودُهُ فِي الْأَرْضِ بِغَيْرِ الْحَقِّ وَظَنُّوا أَنَّهُمْ إِلَيْنَا لَا يُرْجَعُونَ

ಹೌದು, ಫಿರ್‌ಔನ್ ಮತ್ತು ಆತನ ಪಡೆಯು ಅನ್ಯಾಯವಾಗಿ ನಾಡಿನಲ್ಲಿ ಅಹಂಕಾರ ಮೆರೆಯುತ್ತಿದ್ದರು; ಮತ್ತು ನಮ್ಮ ಕಡೆಗೆ ಮರಳಿ ಬರಲಿಕ್ಕಿಲ್ಲ ಎಂದೇ ಅವರೆಲ್ಲ ಭಾವಿಸಿದ್ದರು. {39}

فَأَخَذْنَاهُ وَجُنُودَهُ فَنَبَذْنَاهُمْ فِي الْيَمِّ ۖ فَانْظُرْ كَيْفَ كَانَ عَاقِبَةُ الظَّالِمِينَ

ಹಾಗಿರುವಾಗ ಆತನನ್ನೂ ಆತನ ಇಡೀ ಪಡೆಯನ್ನೂ ಹಿಡಿದು ಶಿಕ್ಷಿಸಲು ನಾವು ಅವರನ್ನು ಸಮುದ್ರಕ್ಕೆ ಎಸೆದು ಬಿಟ್ಟೆವು; ಅನ್ಯಾಯ ಮಾಡಿದವರ ಅಂತ್ಯ ಏನಾಯಿತೆಂದು ನೀವೇ ನೋಡಿರಿ. {40}

وَجَعَلْنَاهُمْ أَئِمَّةً يَدْعُونَ إِلَى النَّارِ ۖ وَيَوْمَ الْقِيَامَةِ لَا يُنْصَرُونَ

[ನಮ್ಮ ಕರೆಯನ್ನು ಅಹಂಕಾರ ತೋರಿ ಧಿಕ್ಕರಿಸಿದ ಕಾರಣ] ಅವರನ್ನು ನಾವು ನರಕದೆಡೆಗೆ ಕರೆಯುವವರ ಪೈಕಿ ಮುಂಚೂಣಿಯ ಜನರನ್ನಾಗಿ ಮಾಡಿ ಬಿಟ್ಟೆವು. ಮಾತ್ರವಲ್ಲ ಪುನರುತ್ಥಾನದ ದಿನ ಅವರಿಗೆ ಯಾವ ಸಹಾಯವೂ ಇರಲಾರದು. {41}

وَأَتْبَعْنَاهُمْ فِي هَٰذِهِ الدُّنْيَا لَعْنَةً ۖ وَيَوْمَ الْقِيَامَةِ هُمْ مِنَ الْمَقْبُوحِينَ

[ಅವರೆಸಗಿದ ದುಷ್ಕೃತ್ಯಗಳ ಕಾರಣ] ಶಾಪವು ಇಹಲೋಕ ಜೀವನದಲ್ಲಿ ಅವರನ್ನು ಹಿಂಬಾಲಿಸುತ್ತಿರುವಂತೆ ನಾವು ಮಾಡಿದೆವು. ಮತ್ತು ಪುನರುತ್ಥಾನದ ದಿನ ಅವರು ಬಹಳ ನಿಕೃಷ್ಟವಾದ ಸ್ಥಿತಿಯಲ್ಲಿರುವರು. {42}

وَلَقَدْ آتَيْنَا مُوسَى الْكِتَابَ مِنْ بَعْدِ مَا أَهْلَكْنَا الْقُرُونَ الْأُولَىٰ بَصَائِرَ لِلنَّاسِ وَهُدًى وَرَحْمَةً لَعَلَّهُمْ يَتَذَكَّرُونَ

ಮುಂಚಿನ ಹಲವು ತಲೆಮಾರುಗಳನ್ನು ನಾಶಪಡಿಸಿದ ನಂತರ ನಾವು ಪ್ರವಾದಿ ಮೂಸಾ ರಿಗೆ (ಧಾರ್ಮಿಕ ವಿಧಿವಿಧಾನಗಳಿರುವ) ಒಂದು ಗ್ರಂಥವನ್ನು ನೀಡಿದ್ದೆವು. ಜನರ ಕಣ್ಣು ತೆರೆಯಿಸುವ ಗ್ರಂಥವದು! ಜನರು ಉಪದೇಶ ಪಡೆಯಲಿ ಎಂಬ ಕಾರಣಕ್ಕಾಗಿಯೇ ಅದರಲ್ಲಿ ಮಾರ್ಗದರ್ಶನವೂ ಇತ್ತು; ಅದು (ಅವರಿಗೊಂದು) ಅನುಗ್ರಹವೂ ಆಗಿತ್ತು! {43}

وَمَا كُنْتَ بِجَانِبِ الْغَرْبِيِّ إِذْ قَضَيْنَا إِلَىٰ مُوسَى الْأَمْرَ وَمَا كُنْتَ مِنَ الشَّاهِدِينَ

ಓ ಪೈಗಂಬರರೇ, ನಾವು ಮೂಸಾ ರಿಗೆ ದಿವ್ಯಾದೇಶದ ಮೂಲಕ (ತೂರ್ ಬೆಟ್ಟದಲ್ಲಿ ಪ್ರವಾದಿತ್ವದ ದೌತ್ಯವನ್ನು) ವಹಿಸಿ ಕೊಟ್ಟಾಗ ಅದರ ಪಶ್ಚಿಮ ಭಾಗದಲ್ಲಿ ನೀವು ಇರಲಿಲ್ಲ; ನೀವು ಆ ಘಟನೆಗೆ ಸಾಕ್ಷಿದಾರರಂತು ಅಲ್ಲ! {44}

وَلَٰكِنَّا أَنْشَأْنَا قُرُونًا فَتَطَاوَلَ عَلَيْهِمُ الْعُمُرُ ۚ وَمَا كُنْتَ ثَاوِيًا فِي أَهْلِ مَدْيَنَ تَتْلُو عَلَيْهِمْ آيَاتِنَا وَلَٰكِنَّا كُنَّا مُرْسِلِينَ

ಅದಲ್ಲದೆ (ಪ್ರವಾದಿ ಮೂಸಾ ರವರ ಕಾಲದ ನಂತರ) ಹಲವು ತಲೆಮಾರುಗಳನ್ನು ನಾವು ಅಸ್ತಿತ್ವಕ್ಕೆ ತಂದೆವು ಮತ್ತು ಅವುಗಳ ಜೀವಿತಾವಧಿಯನ್ನು ನಾವು ಸಾಕಷ್ಟು ಸುದೀರ್ಘಗೊಳಿಸಿದ್ದೆವು. ಹಾಗೆಯೇ ನಮ್ಮ ವಚನಗಳನ್ನು ಮದ್‌ಯನ್ ನ ನಿವಾಸಿಗಳಿಗೆ ಓದಿ ಕೇಳಿಸಲು ನೀವು ಮದ್‌ಯನ್ ಜನರ ಮಧ್ಯೆಯಂತು ವಾಸವಾಗಿರಲಿಲ್ಲ. ಆದರೆ (ಆ ಎಲ್ಲ ಘಟನೆಗಳ ವಿವರಗಳನ್ನು ಈಗ ನಿಮ್ಮತ್ತ) ನಾವೇ ಕಳುಹಿಸುತ್ತಿದ್ದೇವೆ. {45}

وَمَا كُنْتَ بِجَانِبِ الطُّورِ إِذْ نَادَيْنَا وَلَٰكِنْ رَحْمَةً مِنْ رَبِّكَ لِتُنْذِرَ قَوْمًا مَا أَتَاهُمْ مِنْ نَذِيرٍ مِنْ قَبْلِكَ لَعَلَّهُمْ يَتَذَكَّرُونَ

ಹೌದು, ನಾವು ಮೂಸಾರನ್ನು ಕರೆದಾಗ ನೀವು ಆ ತೂರ್ ಬೆಟ್ಟದ ಪಕ್ಕದಲ್ಲಿ ಇರಲಿಲ್ಲ. ಆದರೆ ನಿಮ್ಮ ಒಡೆಯನ ವಿಶೇಷ ಕೃಪೆಯ ಕಾರಣ (ಆ ವಿವರಗಳನ್ನೂ ನಿಮಗೆ ತಿಳಿಸಲಾಗಿದೆ). ಏಕೆಂದರೆ, ನಿಮಗಿಂತ ಮುಂಚೆ ಯಾವ ಜನಾಂಗಕ್ಕೆ ಮುನ್ನೆಚ್ಚರಿಕೆ ನೀಡುವಂತಹ ದೂತರುಗಳು ಬಂದಿರಲಿಲ್ಲವೋ ಅಂತಹ ಒಂದು ಜನಾಂಗಕ್ಕೆ ಈಗ ನೀವು ಮುನ್ನೆಚ್ಚರಿಕೆ ನೀಡುವಂತಾಗಲು! ಮತ್ತು (ನೀವು ನೀಡುವ) ಉಪದೇಶವನ್ನು ಅವರು ಸ್ವೀಕರಿಸುವಂತಾಗಲು! {46}

وَلَوْلَا أَنْ تُصِيبَهُمْ مُصِيبَةٌ بِمَا قَدَّمَتْ أَيْدِيهِمْ فَيَقُولُوا رَبَّنَا لَوْلَا أَرْسَلْتَ إِلَيْنَا رَسُولًا فَنَتَّبِعَ آيَاتِكَ وَنَكُونَ مِنَ الْمُؤْمِنِينَ

(ನಾವು ನಿಮ್ಮನ್ನು ದೂತರನ್ನಾಗಿಸಿ ಕಳುಹಿಸದೆ ಇರುತ್ತಿದ್ದರೆ ಈ ನಿಮ್ಮ ಜನರು) ತಾವು ಕೈಯ್ಯಾರೆ ಗೈದ ಪಾಪಗಳ ಕಾರಣ ಅವರ ಮೇಲೆ ವಿಪತ್ತೇನಾದರೂ ಎರಗಿ ಬಿದ್ದಾಗ, ಓ ನಮ್ಮ ಪ್ರಭುವೇ, ಒಬ್ಬ ದೂತನನ್ನು ನೀನು ನಮ್ಮಲ್ಲಿಗೆ ಏಕೆ ಕಳುಹಿಸಲಿಲ್ಲ? ಹಾಗಿರುತ್ತಿದ್ದರೆ ನಾವು ನಿನ್ನ ವಚನಗಳನ್ನು ಪಾಲಿಸುತ್ತಿದ್ದೆವು, ಮಾತ್ರವಲ್ಲ ವಿಶ್ವಾಸಿಗಳ ಸಾಲಿಗೆ ಸೇರಿದವರಾಗುತ್ತಿದ್ದೆವು ಎಂದೇ ವಾದಿಸುತ್ತಿದ್ದರು! {47}

فَلَمَّا جَاءَهُمُ الْحَقُّ مِنْ عِنْدِنَا قَالُوا لَوْلَا أُوتِيَ مِثْلَ مَا أُوتِيَ مُوسَىٰ ۚ أَوَلَمْ يَكْفُرُوا بِمَا أُوتِيَ مُوسَىٰ مِنْ قَبْلُ ۖ قَالُوا سِحْرَانِ تَظَاهَرَا وَقَالُوا إِنَّا بِكُلٍّ كَافِرُونَ

ಈಗ, ನಮ್ಮ ಕಡೆಯಿಂದ ಸತ್ಯವು ಅವರಿಗೆ ತಲುಪಿರುವಾಗ, ಅವರು (ನೆಪವೊಡ್ಡುತ್ತಾ), ಮೂಸಾ ರಿಗೆ ನೀಡಲ್ಪಟ್ಟಂತಹ ದೃಷ್ಟಾಂತಗಳು ಈತನಿಗೇಕೆ (ಅರ್ಥಾತ್ ಮುಹಮ್ಮದ್ ಪೈಗಂಬರರಿಗೇಕೆ) ನೀಡಲ್ಪಟ್ಟಿಲ್ಲ ಎಂದು ಕೇಳತೊಡಗಿದರು. (ಓ ಪೈಗಂಬರರೇ), ಹಿಂದೆ ಮೂಸಾ ರಿಗೆ ನೀಡಲಾಗಿದ್ದ ದೃಷ್ಟಾಂತಗಳನ್ನು ಇವರು ಒಪ್ಪಲು ನಿರಾಕರಿಸಿದ್ದರು ತಾನೆ! (ಆ ತೌರಾತ್ ಮತ್ತು ಈ ಕುರ್‌ಆನ್) - ಎರಡೂ ಸಹ ಒಂದನ್ನೊಂದು ಬೆಂಬಲಿಸುವ ಮೋಡಿ-ಮಾಟಗಳು; ಹಾಗಿರುವಾಗ ನಾವು ಎಲ್ಲವನ್ನೂ ಸಮಾನವಾಗಿ ನಿರಾಕರಿಸಿದ್ದೇವೆ ಎಂದು ಅವರು ಹೇಳಿದರು. {48}

قُلْ فَأْتُوا بِكِتَابٍ مِنْ عِنْدِ اللَّهِ هُوَ أَهْدَىٰ مِنْهُمَا أَتَّبِعْهُ إِنْ كُنْتُمْ صَادِقِينَ

ನೀವು ಸತ್ಯವಂತರು ಹೌದಾದರೆ ಅವರಡಕ್ಕಿಂತ ಹೆಚ್ಚು ಸನ್ಮಾರ್ಗ ತೋರಿಸ ಬಲ್ಲ ಒಂದು ಗ್ರಂಥವನ್ನು ಅಲ್ಲಾಹ್ ನ ಕಡೆಯಿಂದ ನೀವೇ ತನ್ನಿರಿ; ಹಾಗಾದರೆ ನಾನೂ ಸಹ ಅದನ್ನೇ ಅನುಸರಿಸುವೆ - ಎಂದು ಪೈಗಂಬರರೇ, ನೀವು ಅವರೊಂದಿಗೆ ಹೇಳಿರಿ. {49}

فَإِنْ لَمْ يَسْتَجِيبُوا لَكَ فَاعْلَمْ أَنَّمَا يَتَّبِعُونَ أَهْوَاءَهُمْ ۚ وَمَنْ أَضَلُّ مِمَّنِ اتَّبَعَ هَوَاهُ بِغَيْرِ هُدًى مِنَ اللَّهِ ۚ إِنَّ اللَّهَ لَا يَهْدِي الْقَوْمَ الظَّالِمِينَ

ನಿಮ್ಮ ಮಾತಿಗೆ ಅವರು ಏನೂ ಉತ್ತರ ನೀಡದಿದ್ದರೆ, ಆ ಜನರು ಕೇವಲ ತಮ್ಮ ಮನದಿಚ್ಛೆಯನ್ನಷ್ಟೇ ಅನುಸರಿಸುತ್ತಿದ್ದಾರೆ ಎಂದು ನೀವು ತಿಳಿದುಕೊಳ್ಳಿ. ಅಲ್ಲಾಹ್ ನ ಕಡೆಯಿಂದ ಬರುವ ಸನ್ಮಾರ್ಗವನ್ನು ಬಿಟ್ಟು ಸ್ವತಃ ತನಗೆ ತೋಚಿದಂತೆ ನಡೆಯುವವನಿಗಿಂತ ಹೆಚ್ಚು ದಾರಿಗೆಟ್ಟವನು ಯಾರು ತಾನೆ ಇರಬಹುದು?! ನಿಜವೇನೆಂದರೆ ಅಂತಹ ದುಷ್ಕರ್ಮಿಗಳಿಗೆ ಅಲ್ಲಾಹ್ ನು ಸರಿದಾರಿ ತೋರುವುದಿಲ್ಲ. {50}

وَلَقَدْ وَصَّلْنَا لَهُمُ الْقَوْلَ لَعَلَّهُمْ يَتَذَكَّرُونَ

ವಾಸ್ತವದಲ್ಲಿ, ಜನರು ಉಪದೇಶ ಪಡೆಯಲಿ ಎಂಬ ಕಾರಣಕ್ಕಾಗಿ ನಾವು (ನಿರಂತರವಾಗಿ) ನಮ್ಮ ಸಂದೇಶವನ್ನು ಜನರಿಗೆ ತಲುಪಿಸಿರುತ್ತೇವೆ. {51}

الَّذِينَ آتَيْنَاهُمُ الْكِتَابَ مِنْ قَبْلِهِ هُمْ بِهِ يُؤْمِنُونَ

ಯಾವ (ಜನಾಂಗಕ್ಕೆ) ನಾವು ಈ ಕುರ್‌ಆನ್ ಗಿಂತ ಮುಂಚೆ ಗ್ರಂಥವನ್ನು ನೀಡಿದ್ದೆವೋ ಅವರು ಇದನ್ನು ಸಹ (ಅಲ್ಲಾಹ್ ನು ನೀಡಿದ ಗ್ರಂಥವೆಂದು) ನಂಬುತ್ತಾರೆ. {52}

وَإِذَا يُتْلَىٰ عَلَيْهِمْ قَالُوا آمَنَّا بِهِ إِنَّهُ الْحَقُّ مِنْ رَبِّنَا إِنَّا كُنَّا مِنْ قَبْلِهِ مُسْلِمِينَ

ಅವರ ಮುಂದೆ ಇದನ್ನು ಓದಿ ಕೇಳಿಸಿದಾಗ ನಾವು ಅದನ್ನು ನಂಬುತ್ತೇವೆ; ಇದು ವಾಸ್ತವದಲ್ಲಿ ನಮ್ಮ ಪ್ರಭುವಾದ (ಅಲ್ಲಾಹ್ ನ) ಕಡೆಯಿಂದ ಬಂದ ಸತ್ಯವಾಗಿದೆ; ನಿಜವಾಗಿ ನಾವು ಇದರ ಆಗಮನಕ್ಕೆ ಮುಂಚೆಯೇ (ಹಿಂದಿನ ಗ್ರಂಥವನ್ನು ನಂಬುವ ಮೂಲಕ) ಮುಸ್ಲಿಮರಾಗಿದ್ದೆವು ಎಂದು ಹೇಳುತ್ತಾರೆ. {53}

أُولَٰئِكَ يُؤْتَوْنَ أَجْرَهُمْ مَرَّتَيْنِ بِمَا صَبَرُوا وَيَدْرَءُونَ بِالْحَسَنَةِ السَّيِّئَةَ وَمِمَّا رَزَقْنَاهُمْ يُنْفِقُونَ

ಅಂತಹವರಿಗೆ ನೀಡಬೇಕಾದ ಪ್ರತಿಫಲವನ್ನು ಅವರು ವಹಿಸಿದ ಸಹನೆಯ ಕಾರಣಕ್ಕಾಗಿ ಎರಡು ಬಾರಿ ನೀಡಲಾಗುವುದು! ಅವರು ಕೆಟ್ಟದ್ದನ್ನು ಒಳಿತಿನ ಮೂಲಕ ಎದುರಿಸುವವರು; ಅಲ್ಲದೆ ಏನನ್ನು ನಾವು ಅವರಿಗೆ ದಯಪಾಲಿಸಿರುವೆವೋ ಅವರು ಅದರಿಂದ (ನಮ್ಮ ಮಾರ್ಗದಲ್ಲಿ) ಖರ್ಚು ಮಾಡುವವರು. {54}

وَإِذَا سَمِعُوا اللَّغْوَ أَعْرَضُوا عَنْهُ وَقَالُوا لَنَا أَعْمَالُنَا وَلَكُمْ أَعْمَالُكُمْ سَلَامٌ عَلَيْكُمْ لَا نَبْتَغِي الْجَاهِلِينَ

ನಿರರ್ಥಕವಾದ ಏನನ್ನಾದರೂ ಕೇಳಿಸಿಕೊಂಡಾಗ ಅವರು (ಅದಕ್ಕೆ ಕಿವಿಗೊಡದೆ) ಅದರಿಂದ ಬೇರೆಡೆಗೆ ತಿರುಗಿ ಕೊಳ್ಳುವರು, ಮಾತ್ರವಲ್ಲ ನಾವು ಮಾಡಿದ್ದು ನಮಗೆ ಮತ್ತು ನೀವು ಮಾಡಿದ್ದು ನಿಮಗೆ ಎಂದು ಹೇಳುತ್ತಾ ನಿಮಗೆ ಶುಭವಾಗಲಿ, ಆದರೆ ನಮಗೆ ಅವಿವೇಕಿಗಳ ಸಹವಾಸ ಮಾತ್ರ ಬೇಡ ಎಂದು ಸಾರುವರು! {55}

إِنَّكَ لَا تَهْدِي مَنْ أَحْبَبْتَ وَلَٰكِنَّ اللَّهَ يَهْدِي مَنْ يَشَاءُ ۚ وَهُوَ أَعْلَمُ بِالْمُهْتَدِينَ

ಇನ್ನು ಪೈಗಂಬರರೇ, ನಿಮಗೆ ಇಷ್ಟವಾದವರನ್ನು ಸರಿದಾರಿಗೆ ತರಲು ನಿಮಗಂತೂ ಸಾಧ್ಯವಾಗದು. ಆದರೆ ಅಲ್ಲಾಹ್ ನು ಯಾರಿಗೆ ಬೇಕೋ ಅವರಿಗೆ [ಅವರ ಅರ್ಹತೆಯ ಪ್ರಕಾರ] ಸರಿದಾರಿ ಪಡೆಯುವಂತೆ ಮಾಡುತ್ತಾನೆ! ಸರಿದಾರಿ ಪಡೆಯುವವರ ಬಗ್ಗೆ ಅವನಿಗೆ ಚೆನ್ನಾಗಿಯೇ ತಿಳಿದಿದೆ. {56}

وَقَالُوا إِنْ نَتَّبِعِ الْهُدَىٰ مَعَكَ نُتَخَطَّفْ مِنْ أَرْضِنَا ۚ أَوَلَمْ نُمَكِّنْ لَهُمْ حَرَمًا آمِنًا يُجْبَىٰ إِلَيْهِ ثَمَرَاتُ كُلِّ شَيْءٍ رِزْقًا مِنْ لَدُنَّا وَلَٰكِنَّ أَكْثَرَهُمْ لَا يَعْلَمُونَ

ಈಗ ಅವರು ಹೇಳುತ್ತಿದ್ದಾರೆ: ನಾವು ನಿಮ್ಮೊಂದಿಗೆ (ಅರ್ಥಾತ್ ಮುಹಮ್ಮದ್ ಪೈಗಂಬರರೊಂದಿಗೆ) ಸೇರಿ ಸರಿದಾರಿಯಲ್ಲಿ ನಡೆಯತೊಡಗಿದರೆ ನಮ್ಮದೇ ನಾಡಿನಿಂದ ನಾವು ಕಿತ್ತೊಗೆಯಲ್ಪಡುವೆವು! ಆದರೆ (ಪೈಗಂಬರರೇ), ನಾವು ಅವರಿಗೆ ಸುರಕ್ಷಿತವಾದ (ಈ ಹರಮ್ ನಂತಹ) ಪವಿತ್ರ ಪ್ರದೇಶದಲ್ಲಿ ನೆಲೆಸಲು ಅವಕಾಶ ಮಾಡಿ ಕೊಟ್ಟು, ಅವರ ಆಹಾರರಕ್ಕಾಗಿ ನಮ್ಮ ವತಿಯಿಂದ ಎಲ್ಲಾ ರೀತಿಯ ಫಸಲುಗಳು ಅಲ್ಲಿಗೆ ತಲುಪುತ್ತಿರುವಂತೆ ಮಾಡಿಲ್ಲವೇ? ಆದರೆ ಅವರಲ್ಲಿಯ ಹೆಚ್ಚಿನವರೂ ಅದನ್ನು ಅರ್ಥಮಾಡಿಕೊಳ್ಳುವುದಿಲ್ಲ! {57}

وَكَمْ أَهْلَكْنَا مِنْ قَرْيَةٍ بَطِرَتْ مَعِيشَتَهَا ۖ فَتِلْكَ مَسَاكِنُهُمْ لَمْ تُسْكَنْ مِنْ بَعْدِهِمْ إِلَّا قَلِيلًا ۖ وَكُنَّا نَحْنُ الْوَارِثِينَ

ತಮ್ಮ ಐಷಾರಾಮದ ಜೀವನಶೈಲಿಯ ಬಗ್ಗೆ (ಕುರೈಷರೇ, ನೀವು ಮೆರೆಯುತ್ತಿರುವಂತೆ) ಸೊಕ್ಕು ಮೆರೆದಿದ್ದ ಅವೆಷ್ಟು ಗ್ರಾಮಗಳನ್ನು ನಾವು ನಾಶ ಮಾಡಿರುವೆವು! ಅಗೋ ನೋಡಿ, ಅಲ್ಲಿವೆ ಅವರ (ಪಾಳು ಬಿದ್ದ) ನಿವಾಸಗಳು! ಅವರ ನಂತರ ಅಲ್ಲಿ ಅಪರೂಪಕ್ಕಲ್ಲದೆ ಯಾರೂ ಹೆಚ್ಚು ವಾಸಿಸಿದ್ದಿಲ್ಲ! ಯಥಾರ್ಥದಲ್ಲಿ (ಆ ಗ್ರಾಮಗಳೆಲ್ಲ) ನಮಗೇ ಸೇರಿದ್ದಾಗಿವೆ! {58}

وَمَا كَانَ رَبُّكَ مُهْلِكَ الْقُرَىٰ حَتَّىٰ يَبْعَثَ فِي أُمِّهَا رَسُولًا يَتْلُو عَلَيْهِمْ آيَاتِنَا ۚ وَمَا كُنَّا مُهْلِكِي الْقُرَىٰ إِلَّا وَأَهْلُهَا ظَالِمُونَ

ವಾಸ್ತವದಲ್ಲಿ, ಗ್ರಾಮಗಳ ಸಮೂಹದ ಕೇಂದ್ರ ಭಾಗದಲ್ಲಿ ನಮ್ಮ ವಚನಗಳನ್ನು ಓದಿ ತಿಳಿಸುವ ಒಬ್ಬ ದೂತನನ್ನು ಕಳುಹಿಸುವ ತನಕ ನಿಮ್ಮ ಪ್ರಭುವಾದ (ಅಲ್ಲಾಹ್ ನು) ಯಾವ ಗ್ರಾಮವನ್ನೂ ನಾಶ ಪಡಿಸುವುದಿಲ್ಲ! ಹೌದು, ಆ ಗ್ರಾಮಗಳ ಜನರು (ಅಂತಹ ದೂತರನ್ನು ಧಿಕ್ಕರಿಸುವಂತಹ) ಅಪರಾಧಗಳಲ್ಲಿ ಮಗ್ನವಾದರೆ ಮಾತ್ರ ನಾವು ಅಂತಹ ಗ್ರಾಮಗಳನ್ನು ನಾಶ ಮಾಡುತ್ತೇವೆ! {59}

وَمَا أُوتِيتُمْ مِنْ شَيْءٍ فَمَتَاعُ الْحَيَاةِ الدُّنْيَا وَزِينَتُهَا ۚ وَمَا عِنْدَ اللَّهِ خَيْرٌ وَأَبْقَىٰ ۚ أَفَلَا تَعْقِلُونَ

[ಕುರೈಷರೇ, ಐಷಾರಾಮದ ಜೀವನದ ಬಗ್ಗೆ ಸೊಕ್ಕು ಮೆರೆಯದಿರಿ. ಏಕೆಂದರೆ] ನಿಮಗೆ ಏನನ್ನು ನೀಡಲಾಗಿದೆಯೋ ಅವು ಇಹಲೋಕದ ಸಾಧನ ಸವಲತ್ತುಗಳು ಮತ್ತು ಜೀವನದ ಭೂಷಣಗಳಷ್ಟೆ. ಏನು ಅಲ್ಲಾಹ್ ನ ಬಳಿ ಇದೆಯೋ ಅದು ಸಾಕ್ಷಾತ್ ಸಮೃದ್ಧಿ ಹಾಗೂ ಸದಾ ಉಳಿಯುವಂತಹದ್ದು! ನೀವೇಕೆ ಅರ್ಥ ಮಾಡಿಕೊಳ್ಳುತ್ತಿಲ್ಲ? {60}

أَفَمَنْ وَعَدْنَاهُ وَعْدًا حَسَنًا فَهُوَ لَاقِيهِ كَمَنْ مَتَّعْنَاهُ مَتَاعَ الْحَيَاةِ الدُّنْيَا ثُمَّ هُوَ يَوْمَ الْقِيَامَةِ مِنَ الْمُحْضَرِينَ

(ಜನರೇ), ಒಬ್ಬಾತನಿಗೆ ನಾವು (ಪರಲೋಕದಲ್ಲಿನ) ಒಳಿತುಗಳ ವಾಗ್ದಾನ ಮಾಡುತ್ತೇವೆ, ಮತ್ತು ಆತನು ಅವನ್ನು ಪಡೆಯುತ್ತಾನೆ ಕೂಡ. ಮತ್ತೊಬ್ಬನಿಗೆ ನಾವು ಭೂಲೋಕ ಜೀವನದ ಐಷಾರಮಗಳನ್ನು ನೀಡಿದಾಗ (ಅವನು ಅದಕ್ಕ ಕೃತಜ್ಞನಾಗದ ಕಾರಣ) ಪುನರುತ್ಥಾನದ ದಿನ ಅವನನ್ನು (ಅಪರಾಧಿಯಂತೆ ವಿಚಾರಣೆಗೆ) ಹಾಜರು ಪಡಿಸಲಾಗುತ್ತದೆ. ಆ ಇಬ್ಬರು ಸಮಾನರೇ? {61}

وَيَوْمَ يُنَادِيهِمْ فَيَقُولُ أَيْنَ شُرَكَائِيَ الَّذِينَ كُنْتُمْ تَزْعُمُونَ

ಅವರನ್ನು ಕರೆದು, ನೀವು ನನ್ನ ದೇವತ್ವದಲ್ಲಿ ನನಗೆ ಜೊತೆಗಾರರೆಂದು ಕಲ್ಪಿಸಿಕೊಂಡ ಆ ನಿಮ್ಮ ದೇವರುಗಳು ಈಗ ಎಲ್ಲಿದ್ದಾರೆ ಎಂದು (ಅಲ್ಲಾಹ್ ನು) ಪ್ರಶ್ನಿಸಲಿರುವ ದಿನವನ್ನು (ಮರೆಯದಿರಿ)! {62}

قَالَ الَّذِينَ حَقَّ عَلَيْهِمُ الْقَوْلُ رَبَّنَا هَٰؤُلَاءِ الَّذِينَ أَغْوَيْنَا أَغْوَيْنَاهُمْ كَمَا غَوَيْنَا ۖ تَبَرَّأْنَا إِلَيْكَ ۖ مَا كَانُوا إِيَّانَا يَعْبُدُونَ

ಯಾರ ವಿರುದ್ಧ ಅದಾಗಲೇ ಶಿಕ್ಷೆಯ ಫರಮಾನು ಜಾರಿಯಾಗಿದೆಯೋ ಅವರು [ಅಂದರೆ ಜನರನ್ನು ದಾರಿ ತಪ್ಪಿಸಿದ ಆ ನೇತಾರರು] ಹೇಳುವರು: ಓ ನಮ್ಮ ಪ್ರಭುವೇ, ಈ ಜನರನ್ನು ದಾರಿತಪ್ಪಿಸಿದವರು ನಾವೇ ಆಗಿರುವೆವು. ನಾವು ಸ್ವತಃ ದಾರಿತಪ್ಪಿದಂತೆ ಇವರನ್ನೂ ದಾರಿ ತಪ್ಪಿಸಿ ಬಿಟ್ಟೆವು. ಈಗ ನಾವು ಈ ಜನರಿಂದ ಮುಕ್ತರಾಗಿ ನಿನ್ನೆಡೆಗೆ ತಿರುಗಿರುತ್ತೇವೆ. ಇವರು ನಮ್ಮನ್ನು ಪೂಜಿಸುತ್ತಿರಲಿಲ್ಲ! {63}

وَقِيلَ ادْعُوا شُرَكَاءَكُمْ فَدَعَوْهُمْ فَلَمْ يَسْتَجِيبُوا لَهُمْ وَرَأَوُا الْعَذَابَ ۚ لَوْ أَنَّهُمْ كَانُوا يَهْتَدُونَ

(ದೇವತ್ವದಲ್ಲಿ ನಮ್ಮ) ಪಾಲುದಾರರು ಎಂದು ನೀವು ಬಗೆದಿದ್ದವರನ್ನು ಈಗ ಸಹಾಯಕ್ಕಾಗಿ ಕರೆಯಿರಿ ಎಂದು (ತಪ್ಪು ದಾರಿ ಹಿಡಿದವರೊಂದಿಗೆ) ಹೇಳಲಾಗುವುದು. ಮತ್ತು ಅವರು ಸಹಾಯಕ್ಕಾಗಿ ಅವರನ್ನು ಕರೆಯುವರು ಕೂಡ. ಆದರೆ ಅವರ ಕರೆಗೆ ಅವರು ಉತ್ತರಿಸಲಾರರು. ಮಾತ್ರವಲ್ಲ, ಅವರೆಲ್ಲ ಶಿಕ್ಷೆಯನ್ನು ಕಂಡೇ ತೀರುವರು. ಅವರೆಲ್ಲ ಸರಿದಾರಿಯಲ್ಲಿ ನಡೆದಿರುತ್ತಿದ್ದರೆ (ಅದೆಷ್ಟು ಒಳ್ಳೆಯದಿತ್ತು)! {64}

وَيَوْمَ يُنَادِيهِمْ فَيَقُولُ مَاذَا أَجَبْتُمُ الْمُرْسَلِينَ

ಅಲ್ಲಾಹ್ ನು ಅವರನ್ನು (ವಿಚಾರಣೆಗಾಗಿ) ಕರೆಯಲಿರುವ ದಿನ, ನಮ್ಮ ದೂತರುಗಳು (ನಿಮ್ಮನ್ನು ಸರಿದಾರಿಯತ್ತ ಕರೆದಾಗ) ಅವರಿಗೆ ನೀವು ಏನೆಂದು ಉತ್ತರ ನೀಡಿದ್ದಿರಿ ಎಂದು ಪ್ರಶ್ನಿಸಲಿರುವನು. {65}

فَعَمِيَتْ عَلَيْهِمُ الْأَنْبَاءُ يَوْمَئِذٍ فَهُمْ لَا يَتَسَاءَلُونَ

ಅಂದು ಅವರು (ಕಕ್ಕಾಬಿಕ್ಕಿಯಾಗಿ) ಎಲ್ಲಾ ವಿಷಯಗಳು ಅವರಿಂದ ಮಾಯವಾಗಿ ಬಿಡುವುದು ಮತ್ತು ಪರಸ್ಪರರೊಂದಿಗೆ ವಿಚಾರಿಸಲೂ ಅವರಿಗೆ ಸಾಧ್ಯವಾಗದು! {66}

فَأَمَّا مَنْ تَابَ وَآمَنَ وَعَمِلَ صَالِحًا فَعَسَىٰ أَنْ يَكُونَ مِنَ الْمُفْلِحِينَ

ಇನ್ನು ಯಾರು (ದೂತರುಗಳ ಕರೆಗೆ ಓಗೊಟ್ಟು, ತಾವು ಮಾಡಿದ ತಪ್ಪುಗಳಿಗಾಗಿ) ಪಶ್ಚಾತ್ತಾಪ ಪಟ್ಟು, ವಿಶ್ವಾಸಿಗಳಾಗಿ, ಒಳ್ಳೆಯ ಕೆಲಸಕಾರ್ಯಗಳಲ್ಲಿ ನಿರತರಾಗುತ್ತಾರೋ ಅಂತಹವರು (ಪರಲೋಕದಲ್ಲಿ) ಯಶಸ್ವಿಗಳಾಗುತ್ತಾರೆಂದು ಆಶಿಸಬಹುದು. {67}

وَرَبُّكَ يَخْلُقُ مَا يَشَاءُ وَيَخْتَارُ ۗ مَا كَانَ لَهُمُ الْخِيَرَةُ ۚ سُبْحَانَ اللَّهِ وَتَعَالَىٰ عَمَّا يُشْرِكُونَ

ಹೌದು, (ಪೈಗಂಬರರೇ), ನಿಮ್ಮ ಪ್ರಭು ಏನನ್ನು ಬೇಕಾದರೂ, ಯಾರನ್ನು ಬೇಕಾದರೂ ಸೃಷ್ಟಿಸಬಲ್ಲನು ಮತ್ತು (ಪ್ರವಾದಿತ್ವದ ದೌತ್ಯಕ್ಕಾಗಿ ಯಾರನ್ನು ಬೇಕಾದರೂ) ಆಯ್ಕೆ ಮಾಡಿಕೊಳ್ಳ ಬಲ್ಲನು. [ಯಾರನ್ನು ಅಲ್ಲಾಹ್ ನ ಸಹವರ್ತಿಗಳೆಂದು ಈ ಜನರು ಭಾವಿಸಿರುವರೋ ಅವರು, ಅಂದರೆ ಮುಖ್ಯವಾಗಿ ಮಲಕ್ ಗಳು] ಆಯ್ಕೆಯ ಅಧಿಕಾರ ಪಡೆದಿಲ್ಲ. ಹೌದು, ಅಲ್ಲಾಹ್ ನು ಪರಮ ಪವಿತ್ರನು! ಅವರು ಅವನ ಸಹಭಾಗಿಳೆಂದು ಭಾವಿಸುವ ಎಲ್ಲಕ್ಕಿಂತಲೂ ಅವನು ಪರಮೋನ್ನತನು! {68}

وَرَبُّكَ يَعْلَمُ مَا تُكِنُّ صُدُورُهُمْ وَمَا يُعْلِنُونَ

ಅವರ ಹೃದಯಗಳು ಬಚ್ಚಿಡುವುದನ್ನೂ ಬಹಿರಂಗ ಪಡಿಸುವುದನ್ನೂ ನಿಮ್ಮ ಒಡೆಯನಾದ (ಅಲ್ಲಾಹ್ ನು) ತಿಳಿದಿರುತ್ತಾನೆ. {69}

وَهُوَ اللَّهُ لَا إِلَٰهَ إِلَّا هُوَ ۖ لَهُ الْحَمْدُ فِي الْأُولَىٰ وَالْآخِرَةِ ۖ وَلَهُ الْحُكْمُ وَإِلَيْهِ تُرْجَعُونَ

ಹೌದು, ಅವನೇ ಅಲ್ಲಾಹ್ ನು. ಅವನ ಹೊರತು ಆರಾಧನೆಗೆ ಯೋಗ್ಯರಾದವರು ಯಾರೂ ಇಲ್ಲ. ಇಹಲೋಕದಲ್ಲೂ ಪರಲೋಕದಲ್ಲೂ ಸ್ತುತಿ-ಸ್ತೋತ್ರಗಳು ಸಲ್ಲಬೇಕಾಗಿರುವುದು ಅವನಿಗೆ ಮಾತ್ರ. ತೀರ್ಪು ನೀಡುವ ಹಕ್ಕು ಅವನದ್ದೇ ಆಗಿದೆ. ನಿಮ್ಮೆಲ್ಲರನ್ನು (ಅಂತಿಮ ತೀರ್ಪಿಗಾಗಿ) ಮರಳಿಸಲಾಗುವುದು ಸಹ ಅವನೆಡೆಗೇ! {70}

قُلْ أَرَأَيْتُمْ إِنْ جَعَلَ اللَّهُ عَلَيْكُمُ اللَّيْلَ سَرْمَدًا إِلَىٰ يَوْمِ الْقِيَامَةِ مَنْ إِلَٰهٌ غَيْرُ اللَّهِ يَأْتِيكُمْ بِضِيَاءٍ ۖ أَفَلَا تَسْمَعُونَ

ಪೈಗಂಬರರೇ, ನೀವು ಈ ಜನರೊಂದಿಗೆ ಕೇಳಿರಿ: ಒಂದು ವೇಳೆ ಅಲ್ಲಾಹ್ ನು ನಿಮ್ಮ ಮೇಲೆ ಲೋಕಾಂತ್ಯಗೊಳ್ಳುವ ದಿನದ ವರೆಗೆ ಶಾಶ್ವತವಾದ ರಾತ್ರಿಯನ್ನು ಹೇರಿದರೆ, ನೀವೇ ಚಿಂತಿಸಿ ನೋಡಿ, ಅಲ್ಲಾಹ್ ನ ಹೊರತು ಬೇರೆ ಯಾವ ದೇವರು ತಾನೆ ನಿಮಗೆ ಬೆಳಕನ್ನು ತಂದು ಕೊಟ್ಟಾರು? ಏನು, ನಿಮಗೆ ಇದು ಕೇಳಿಸಿಕೊಳ್ಳುವುದಿಲ್ಲವೇ? {71}

قُلْ أَرَأَيْتُمْ إِنْ جَعَلَ اللَّهُ عَلَيْكُمُ النَّهَارَ سَرْمَدًا إِلَىٰ يَوْمِ الْقِيَامَةِ مَنْ إِلَٰهٌ غَيْرُ اللَّهِ يَأْتِيكُمْ بِلَيْلٍ تَسْكُنُونَ فِيهِ ۖ أَفَلَا تُبْصِرُونَ

ಹಾಗೆಯೇ, ಅವರೊಂದಿಗೆ ಕೇಳಿರಿ: ಒಂದು ವೇಳೆ ಅಲ್ಲಾಹ್ ನು ನಿಮ್ಮ ಮೇಲೆ ಲೋಕಾಂತ್ಯಗೊಳ್ಳುವ ದಿನದ ವರೆಗೆ ಶಾಶ್ವತವಾದ ಹಗಲನ್ನು ಹೇರಿ ಬಿಟ್ಟರೆ, ನೀವು ಚಿಂತಿಸಿ ನೋಡಿ, ಅಲ್ಲಾಹ್ ನ ಹೊರತು ಬೇರೆ ಯಾವ ದೇವರು ತಾನೆ ನಿಮಗೆ, ನೀವು ವಿಶ್ರಾಂತಿ ಪಡೆಯಲು ರಾತ್ರಿಯನ್ನು ತಂದು ಕೊಡಬಲ್ಲರು? ನೀವು ವಿಚಾರಮಾಡುವುದಿಲ್ಲವೇ? {72}

وَمِنْ رَحْمَتِهِ جَعَلَ لَكُمُ اللَّيْلَ وَالنَّهَارَ لِتَسْكُنُوا فِيهِ وَلِتَبْتَغُوا مِنْ فَضْلِهِ وَلَعَلَّكُمْ تَشْكُرُونَ

ಹೌದು, ತನ್ನ ಅನುಗ್ರಹದಿಂದ ನಿಮಗಾಗಿ ರಾತ್ರಿಯನ್ನೂ ಹಗಲನ್ನೂ ಅವನು ಸೃಷ್ಟಿಸಿರುವನು. ನೀವು ರಾತ್ರಿಯಲ್ಲಿ ವಿಶ್ರಾಂತಿ ಪಡೆಯಲು ಮತ್ತು ಹಗಲಲ್ಲಿ ಅವನ ಕೃಪಯನ್ನು (ಅಂದರೆ ಉಪಜೀವನವನ್ನು) ಅರಸಲು ಮತ್ತು ನೀವು ಅವನಿಗೆ ಕೃತಜ್ಞರಾಗಿ ಜೀವಿಸಲು! {73}

وَيَوْمَ يُنَادِيهِمْ فَيَقُولُ أَيْنَ شُرَكَائِيَ الَّذِينَ كُنْتُمْ تَزْعُمُونَ

ಅವರನ್ನೆಲ್ಲ ಕರೆದು ಸೇರಿಸುವ ಆ ದಿನ, ನನ್ನ ಜೊತೆಗಾರರೆಂದು ನೀವು ವಾದಿಸುತ್ತಿದ್ದ ಆ (ನಿಮ್ಮ ಮಿಥ್ಯ ದೇವರುಗಳು) ಈಗ ಎಲ್ಲಿದ್ದಾರೆಂದು ಅವನು ಕೇಳಲಿದ್ದಾನೆ. {74}

وَنَزَعْنَا مِنْ كُلِّ أُمَّةٍ شَهِيدًا فَقُلْنَا هَاتُوا بُرْهَانَكُمْ فَعَلِمُوا أَنَّ الْحَقَّ لِلَّهِ وَضَلَّ عَنْهُمْ مَا كَانُوا يَفْتَرُونَ

(ಅಂದು) ಪ್ರತಿಯೊಂದು ಜನಸಮೂಹದಿಂದ ಒಬ್ಬ ಸಾಕ್ಷಿಯನ್ನು [ಅಂದರೆ ಆಯಾ ಜನಸಮೂಹಕ್ಕೆ ಸರಿದಾರಿ ತೋರಿಸಲು ಆಗಮಿಸಿದ್ದ ಪ್ರವಾದಿಯನ್ನು] ನಾವು ಮುಂದೆ ತರಲಿರುವೆವು ಮತ್ತು ಜನರೊಡನೆ (ದೇವರೆಂದು ನೀವು ವಾದಿಸುತ್ತಿದ್ದವರ ಬಗ್ಗೆ) ನಿಮ್ಮ ಪುರಾವೆಯನ್ನು ತನ್ನಿ ಎಂದು ಹೇಳಲಿರುವೆವು. ಆಗ ಅವರಿಗೆ ದೇವತ್ವದ ಹಕ್ಕು ಕೇವಲ ಅಲ್ಲಾಹ್ ನಿಗೆ ಮಾತ್ರವಿರುವ ವಿಷಯ ತಿಳಿಯಲಿರುವುದು! ಮಾತ್ರವಲ್ಲ, ಅವರು ಸ್ವತಃ ರಚಿಸಿಕೊಂಡಂತಹ ಎಲ್ಲ ಕಟ್ಟುಕಥೆಗಳು ಅವರಿಂದ ನೀಗಿ ಹೋಗುವುವು. {75}

إِنَّ قَارُونَ كَانَ مِنْ قَوْمِ مُوسَىٰ فَبَغَىٰ عَلَيْهِمْ ۖ وَآتَيْنَاهُ مِنَ الْكُنُوزِ مَا إِنَّ مَفَاتِحَهُ لَتَنُوءُ بِالْعُصْبَةِ أُولِي الْقُوَّةِ إِذْ قَالَ لَهُ قَوْمُهُ لَا تَفْرَحْ ۖ إِنَّ اللَّهَ لَا يُحِبُّ الْفَرِحِينَ

ನಿಶ್ಚಿತವಾಗಿ, (ಕುರೈಷರೇ), ಕಾರೂನ್ ಎಂಬವನು ಪ್ರವಾದಿ ಮೂಸಾ ರ ಜನಾಂಗಕ್ಕೆ ಸೇರಿದವನೇ ಆಗಿದ್ದನು. ಆದರೆ ಅವನು ಜನರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದನು. ನಾವು ಅವನಿಗೆ ಅಪಾರವಾದ ಸಂಪತ್ತು ಕೊಟ್ಟಿದ್ದೆವು. ಅದು ಎಷ್ಟಿತ್ತೆಂದರೆ ಅದರ ಕೀಲಿಕೈಗಳನ್ನು ಹೊರುವ ಕೆಲಸವು ಗಟ್ಟಿಮುಟ್ಟಾದ ಜನಗಳ ಒಂದು ತಂಡಕ್ಕೂ ಸ್ವಲ್ಪ ಕಷ್ಟವೇ ಆಗುತ್ತಿತ್ತು. [ಆದನ್ನು ಕಂಡು ಅವನು ಅಹಂಭಾವದಿಂದ ಹಿರಿಹಿರಿ ಹಿಗ್ಗುತ್ತಿದ್ದನು. ಅವನ ದಬ್ಬಾಳಿಕೆಯ ಕಾರಣ ಹೆಚ್ಚಿನ ಜನರಿಗೆ ಮೂಸಾ ರೊಂದಿಗೆ ಒಲವುಂಟಾಗಿತ್ತು]. ನೀನು ಅಹಂಕಾರದಿಂದ ಹಿಗ್ಗದಿರು, ಏಕೆಂದರೆ ಅಹಂಕರದಿಂದ ಹಿಗ್ಗುವವರನ್ನು ಅಲ್ಲಾಹ್ ನು ಮೆಚ್ಚುವುದಿಲ್ಲ ಎಂದು ಅವನ ಜನರು ಅವನಿಗೆ (ಬುದ್ಧಿವಾದದ) ಮಾತು ಹೇಳಿದರು. {76}

وَابْتَغِ فِيمَا آتَاكَ اللَّهُ الدَّارَ الْآخِرَةَ ۖ وَلَا تَنْسَ نَصِيبَكَ مِنَ الدُّنْيَا ۖ وَأَحْسِنْ كَمَا أَحْسَنَ اللَّهُ إِلَيْكَ ۖ وَلَا تَبْغِ الْفَسَادَ فِي الْأَرْضِ ۖ إِنَّ اللَّهَ لَا يُحِبُّ الْمُفْسِدِينَ

[ಹಿರಿಹಿರಿ ಹಿಗ್ಗುವ ಬದಲು] ಅಲ್ಲಾಹ್ ನು ನಿನಗೆ ಏನನ್ನು ನೀಡಿರುವನೋ ಅದರ ಮೂಲಕ ಪರಲೋಕದ (ಶಾಶ್ವತವಾದ) ನೆಲೆಯನ್ನು ಅರಸು. ಅದೇ ವೇಳೆ, ಈ ಲೋಕದಲ್ಲಿ ನಿನಗಿರುವ ಪಾಲನ್ನು ಉಪಯೋಗಿಸಲು ಮರೆಯದಿರು. ಅಲ್ಲಾಹ್ ನು ನಿನಗೆ ಒಳಿತು ಮಾಡಿರುವಂತೆ ನೀನು ಸಹ (ಈ ನಿನ್ನ ಸಂಪತ್ತಿನಿಂದ) ಜನರಿಗೆ ಒಳಿತನ್ನೇ ಮಾಡು. ನಾಡಿನಲ್ಲಿ ಅನ್ಯಾಯ - ಅನಾಚಾರಗಳನ್ನು ಹಬ್ಬಲು ನೀನು ಬಯಸದಿರು. ಅನ್ಯಾಯ - ಅನಾಚಾರಗಳಲ್ಲಿ ಮಗ್ನರಾದವರನ್ನು ಅಲ್ಲಾಹ್ ನು ಇಷ್ಟಪಡುವುದಿಲ್ಲ - ಜನರು ಹೇಳಿದರು. {77}

قَالَ إِنَّمَا أُوتِيتُهُ عَلَىٰ عِلْمٍ عِنْدِي ۚ أَوَلَمْ يَعْلَمْ أَنَّ اللَّهَ قَدْ أَهْلَكَ مِنْ قَبْلِهِ مِنَ الْقُرُونِ مَنْ هُوَ أَشَدُّ مِنْهُ قُوَّةً وَأَكْثَرُ جَمْعًا ۚ وَلَا يُسْأَلُ عَنْ ذُنُوبِهِمُ الْمُجْرِمُونَ

ಅವನು ಹೇಳತೊಡಗಿದನು: (ನನ್ನ ಸಂಪತ್ತಿನಿಂದ ಜನರಿಗಾಗಿ ನಾನೇಕೆ ವ್ಯಯಿಸಬೇಕು?) ನನಗೆ ಇವೆಲ್ಲ ಸಿಕ್ಕಿರುವುದು ಕೇವಲ ನನ್ನ (ವೈಯಕ್ತಿಕ) ಜ್ಞಾನದ ನಿಮಿತ್ತವಾಗಿದೆ! ... ಹೌದೇನು? ಶಕ್ತಿಯಲ್ಲೂ, ಲೌಕಿಕ ಸಾಮರ್ಥ್ಯದಲ್ಲೂ ಮತ್ತು ಜನಬಲದಲ್ಲೂ ಈತನಿಗಿಂತ ಹೆಚ್ಚು ಬಲಾಢ್ಯರಾಗಿದ್ದ ಅದೆಷ್ಟು ತಲೆಮಾರುಗಳನ್ನು ಅಲ್ಲಾಹ್ ನು ನಾಶಮಾಡಿರುವನು ಎಂಬ ವಿಷಯ ಈತನಿಗೆ ತಿಳಿಯದೇ ಹೋಯಿತೇ?! (ಜನರು ಹಾಗೆಂದು ಪ್ರತಿಕ್ರಿಯಿಸಿದರು). ಅಂತಹ ಅಪರಾಧಿಗಳನ್ನು (ಶಿಕ್ಷಿಸುವಾಗ) ಅವರೊಂದಿಗೆ ಅವರ ಅಪರಾಧಗಳ ಬಗ್ಗೆ ವಿಚಾರಿಸುವ ಅಗತ್ಯವಿಲ್ಲ! {78}

فَخَرَجَ عَلَىٰ قَوْمِهِ فِي زِينَتِهِ ۖ قَالَ الَّذِينَ يُرِيدُونَ الْحَيَاةَ الدُّنْيَا يَا لَيْتَ لَنَا مِثْلَ مَا أُوتِيَ قَارُونُ إِنَّهُ لَذُو حَظٍّ عَظِيمٍ

ಹಾಗಿರುತ್ತಾ, ಒಂದೊಮ್ಮೆ ಕಾರೂನ್ ನು ತನ್ನೆಲ್ಲಾ ವೈಭವಗಳೊಂದಿಗೆ ತನ್ನವರ ಮುಂದೆ ಪ್ರತ್ಯಕ್ಷನಾದನು. ಲೌಕಿಕ ಜೀವನವನ್ನೇ ಬಯಸಿದ್ದವರು ಅದನ್ನು ಕಂಡು, ಅಯ್ಯೋ, ನಮ್ಮದೆಂತಹ ದುರದೃಷ್ಟ! ಕಾರೂನ್ ನಿಗೆ ಸಿಕ್ಕಂತಹದ್ದೇ ನಮಗೂ ಸಹ ಸಿಕ್ಕಿದ್ದರೆ ಅದೆಷ್ಟು ಚೆನ್ನಾಗಿರುತ್ತಿತ್ತು! ಅವನು ನಿಜವಾಗಿಯೂ ಮಹಾ ಅದೃಷ್ಟಶಾಲಿಯೇ ಸರಿ ಎಂದು ಉದ್ಗರಿಸಿದರು! {79}

وَقَالَ الَّذِينَ أُوتُوا الْعِلْمَ وَيْلَكُمْ ثَوَابُ اللَّهِ خَيْرٌ لِمَنْ آمَنَ وَعَمِلَ صَالِحًا وَلَا يُلَقَّاهَا إِلَّا الصَّابِرُونَ

ಆದರೆ ಸರಿಯಾದ ಜ್ಞಾನ ಪಡೆದಿದ್ದ ಜನರು ಉತ್ತರಿಸಿದರು: ನಿಮ್ಮ ದುರ್ಗತಿಯೇ! ನಿಜವಾದ ವಿಶ್ವಾಸಿಗಳಾಗಿ, ಜೊತೆಗೆ ಸತ್ಕರ್ಮಗಳನ್ನೂ ಮಾಡಿದವರಿಗೆ (ಪರಲೋಕದಲ್ಲಿ) ಅಲ್ಲಾಹ್ ನು ನೀಡುವ ಪ್ರತಿಫಲವೇ ಅತ್ಯಂತ ಶ್ರೇಷ್ಠವಾದುದು. ಆದರೆ ಅದು ಸಿಗಲಿರುವುದು (ಇಹಲೋಕ ಜೀವನದಲ್ಲಿ) ಸಹನೆಯೊಂದಿಗೆ ವರ್ತಿಸಿದವರಿಗೆ ಮಾತ್ರ! {80}

فَخَسَفْنَا بِهِ وَبِدَارِهِ الْأَرْضَ فَمَا كَانَ لَهُ مِنْ فِئَةٍ يَنْصُرُونَهُ مِنْ دُونِ اللَّهِ وَمَا كَانَ مِنَ الْمُنْتَصِرِينَ

ಕೊನೆಗೆ ನಾವು ಆ ಕಾರೂನ್ ಮತ್ತು ಅತನ ಅರಮನೆಯನ್ನು ಭೂಮಿಯ ಒಳಗೆ ಹುದುಗಿಸಿ ಬಿಟ್ಟೆವು! ಆಗ ಅಲ್ಲಾಹ್ ನಿಗೆ ಎದುರಾಗಿ ಅತನಿಗೆ ನೆರವು ನೀಡಲು ಯಾವ ಗುಂಪೂ ಅವನ ಬಳಿ ಇರಲಿಲ್ಲ; ಮತ್ತು ತನಗೆ ತಾನೇ ನೆರವಾಗಲೂ ಅತನಿಗೆ ಸಾಧ್ಯವಾಗಲಿಲ್ಲ. {81}

وَأَصْبَحَ الَّذِينَ تَمَنَّوْا مَكَانَهُ بِالْأَمْسِ يَقُولُونَ وَيْكَأَنَّ اللَّهَ يَبْسُطُ الرِّزْقَ لِمَنْ يَشَاءُ مِنْ عِبَادِهِ وَيَقْدِرُ ۖ لَوْلَا أَنْ مَنَّ اللَّهُ عَلَيْنَا لَخَسَفَ بِنَا ۖ وَيْكَأَنَّهُ لَا يُفْلِحُ الْكَافِرُونَ

ಯಾವ ಜನರು ನಿನ್ನೆಯ ತನಕ ಆತನಿಗಿದ್ದ ಸ್ಥಾನಮಾನಕ್ಕಾಗಿ ಆಸೆ ಪಡುತ್ತಿದ್ದರೋ ಅವರು ಬೆಳಗಾಗುತ್ತಿದ್ದಂತೆಯೇ ಹೇಳತೊಡಗಿದರು: ಛೆ, ಅದೇನಾಗಿ ಬಿಟ್ಟಿತು! ಹೌದು, ಅಲ್ಲಾಹ್ ನು ತನ್ನ ದಾಸರ ಪೈಕಿ ಯಾರಿಗೆ ನೀಡಬಯಸುತ್ತಾನೋ ಅವರಿಗೆ ಸಂಪತ್ತು, ಸವಲತ್ತುಗಳನ್ನು ಹೇರಳವಾಗಿ ನೀಡುತ್ತಾನೆ ಮತ್ತು ಕುಂಠಿತಗೊಳಿಸಲು ಬಯಸಿದರೆ ಅದನ್ನು ಕುಂಠಿತಗೊಳಿಸುತ್ತಾನೆ. ಒಂದು ವೇಳೆ ಅಲ್ಲಾಹ್ ನು ನಮ್ಮ ಮೇಲೆ ಔದಾರ್ಯ ತೋರದಿದ್ದರು ನಮ್ಮನ್ನು ಸಹ ಭೂಮಿಯ ಒಳಗೆ ಹುದುಗಿಸಿ ಬಿಡುತ್ತಿದ್ದನು. ದುರವಸ್ಥೆಯೇ ಸರಿ! ನಿಜವಾಗಿ, (ಉಪದೇಶವನ್ನು) ಧಿಕ್ಕರಿದವರು ಎಂದೂ ವಿಜಯಿಗಳಾಗಲಾರರು! {82}

تِلْكَ الدَّارُ الْآخِرَةُ نَجْعَلُهَا لِلَّذِينَ لَا يُرِيدُونَ عُلُوًّا فِي الْأَرْضِ وَلَا فَسَادًا ۚ وَالْعَاقِبَةُ لِلْمُتَّقِينَ

ಹೌದು, (ಆ ವಿಜಯವೆಂದರೆ) ಅದು ಪರಲೋಕದಲ್ಲಿನ ಶಾಶ್ವತವಾದ ನೆಲೆ! ಅದನ್ನು ನಾವು, ಭೂಲೋಕದಲ್ಲಿ ದೊಡ್ಡಸ್ತಿಕೆ ಮೆರೆಯದ ಹಾಗೂ ಅನ್ಯಾಯ-ಅನಾಚಾರಗಳನ್ನು ಹಬ್ಬದ ಜನರಿಗೆ ನೀಡಲಿದ್ದೇವೆ. ಹೌದು, ಅಂತಿಮ ವಿಜಯವು (ಅಲ್ಲಾಹ್ ನ ಮಾತು ಮೀರದೆ) ಜಾಗರೂಕತೆಯೊಂದಿಗೆ ಜೀವಿಸಿದವರಿಗೆ ಮೀಸಲು. {83}

مَنْ جَاءَ بِالْحَسَنَةِ فَلَهُ خَيْرٌ مِنْهَا ۖ وَمَنْ جَاءَ بِالسَّيِّئَةِ فَلَا يُجْزَى الَّذِينَ عَمِلُوا السَّيِّئَاتِ إِلَّا مَا كَانُوا يَعْمَلُونَ

ಯಾರಾದರೂ (ಪರಲೋಕಕ್ಕೆ) ಒಳಿತುಗಳೊಂದಿಗೆ ಬಂದರೆ ಪ್ರತಿಫಲವಾಗಿ ಆತನಿಗೆ ಅದಕ್ಕಿಂತ ಉತ್ತಮವಾದುದು ಸಗಲಿದೆ. ಇನ್ನು ಕೆಡುಕು ಮಾಡಿ ಬಂದವರ ವಿಷಯ - ಕೆಡುಕು ಮಾಡಿದವರಿಗೆ ತಾವು ಮಾಡಿದ ಕೆಡುಕಿಗೆ ಸಮಾನವಾದ ಪ್ರತಿಫಲನ್ನಷ್ಟೇ ನೀಡಲಾಗುವುದು. {84}

إِنَّ الَّذِي فَرَضَ عَلَيْكَ الْقُرْآنَ لَرَادُّكَ إِلَىٰ مَعَادٍ ۚ قُلْ رَبِّي أَعْلَمُ مَنْ جَاءَ بِالْهُدَىٰ وَمَنْ هُوَ فِي ضَلَالٍ مُبِينٍ

(ಪೈಗಂಬರರೇ), ಕುರ್‌ಆನ್ ನ ಬೋಧನೆಯನ್ನು ನಿಮ್ಮ ಮೇಲೆ ಕಡ್ಡಾಯಗೊಳಿಸಿದ ಆ (ಅಲ್ಲಾಹ್ ನು) ನಿಮ್ಮನ್ನು ನಿಶ್ಚಿತವಾಗಿ (ಅತ್ಯುತ್ತಮವಾದ) ಅಂತಿಮ ನೆಲೆಗೆ ಮರಳಿಸಿಯೇ ತೀರುವನು. ನೀವು (ಆ ಜನರಿಗೆ ಇಷ್ಟೇ) ಹೇಳಿರಿ: ಸರಿದಾರಿಯಲ್ಲಿ ಇರುವವರು ಯಾರು ಹಾಗೂ ಬಹಳ ವ್ಯಕ್ತವಾದ ತಪ್ಪು ದಾರಿಯಲ್ಲಿರುವರು ಯಾರು ಎಂಬುದು ನನ್ನ ಒಡೆಯನಾದ (ಅಲ್ಲಾಹ್ ನಿಗೆ) ಬಹಳ ಚೆನ್ನಾಗಿ ತಿಳಿದಿದೆ! {85}

وَمَا كُنْتَ تَرْجُو أَنْ يُلْقَىٰ إِلَيْكَ الْكِتَابُ إِلَّا رَحْمَةً مِنْ رَبِّكَ ۖ فَلَا تَكُونَنَّ ظَهِيرًا لِلْكَافِرِينَ

ಈ ಗ್ರಂಥವನ್ನು ನಿಮಗೆ ನೀಡಲಾಗುವುದು ಎಂದು, ಪೈಗಂಬರರೇ, ನೀವು ಊಹಿಸಿಯೂ ಇರಲಿಲ್ಲ! ಇದು ನೀಡಲ್ಪಟ್ಟಿರುವುದು ಸಾಕ್ಷಾತ್ ನಿಮ್ಮ ಒಡೆಯನ ಅನುಗ್ರಹವಲ್ಲದೆ ಬೇರೇನೂ ಅಲ್ಲ! ಆದ್ದರಿಂದ (ನೀವು ಇದನ್ನು ಜನರಿಗೆ ತಲುಪಿಸಿರಿ ಮತ್ತು) ಧಿಕ್ಕಾರ ತೋರುವ ಜನರಿಗೆ ನೀವೆಂದೂ ನೆರವು ನೀಡದಿರಿ. {86}

وَلَا يَصُدُّنَّكَ عَنْ آيَاتِ اللَّهِ بَعْدَ إِذْ أُنْزِلَتْ إِلَيْكَ ۖ وَادْعُ إِلَىٰ رَبِّكَ ۖ وَلَا تَكُونَنَّ مِنَ الْمُشْرِكِينَ

ಅಲ್ಲಾಹ್ ನ ವಚನಗಳನ್ನು ನಿಮ್ಮತ್ತ ಇಳಿಸಿಕೊಡಲಾದ ನಂತರ ಅದರ ಬೋಧನೆಯಿಂದ ಯಾರೂ ನಿಮ್ಮನ್ನು ತಡೆದಿಡದಿರಲಿ. ನೀವು ನಿಮ್ಮ ಒಡೆಯನಾದ (ಅಲ್ಲಾಹ್ ನತ್ತ ನಿರಂತರವಾಗಿ) ಜನರನ್ನು ಆಹ್ವಾನಿಸುತ್ತಲಿರಿ. ನೀವೆಂದೂ ಮಿಥ್ಯ ದೇವರುಗಳನ್ನು ಆರಾಧಿಸುವವರ ಸಾಲಿಗೆ ಸೇರದಿರಿ. {87}

وَلَا تَدْعُ مَعَ اللَّهِ إِلَٰهًا آخَرَ ۘ لَا إِلَٰهَ إِلَّا هُوَ ۚ كُلُّ شَيْءٍ هَالِكٌ إِلَّا وَجْهَهُ ۚ لَهُ الْحُكْمُ وَإِلَيْهِ تُرْجَعُونَ

ಅಲ್ಲಾಹ್ ನೊಂದಿಗೆ ಪ್ರಾರ್ಥಿಸುವಾಗ ನೀವು (ಆ ಪ್ರಾರ್ಥನೆಯಲ್ಲಿ) ಬೇರೆ ಯಾರನ್ನೂ ಸೇರಿಸದಿರಿ. ಅವನಲ್ಲದೆ ಆರಾಧ್ಯರು ಬೇರೆ ಯಾರೂ ಇಲ್ಲ. ಅವನ ಅಸ್ತಿತ್ವವೊಂದರ ಹೊರತು ಬೇರೆಲ್ಲವೂ ನಾಶವಾಗುವಂತಹದ್ದು. ಸಾರ್ವಭೌಮ ಅಧಿಕಾರ ಅವನದ್ದಾಗಿದೆ ಹಾಗೂ ಅಂತಿಮವಾಗಿ ನೀವೆಲ್ಲರೂ ಮರಳಲಿರುವುದು ಅವನ ಕಡೆಗೇ ಆಗಿರುತ್ತದೆ. {88}

---  

ಅನುವಾದಿತ ಸೂರಃ ಗಳು 



        Featured post

        ಸರಳ ಕುರ್‌ಆನ್ - ಕನ್ನಡದಲ್ಲಿ ಮುನ್ನುಡಿ ದಯಾಮಯಿಯೂ ಕಾರುಣ್ಯವಂತನೂ ಆದ ಅಲ್ಲಾಹ್ ನ ಪವಿತ್ರ ನಾಮದೊಂದಿಗೆ ... ! بسم الله الرحمن الرحيم، الحمد لله رب...